ಶಿವಮೊಗ್ಗ: ಲಾಕ್ಡೌನ್ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಮನೆಯಲ್ಲಿಯೇ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ಡಿಸಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಲಾಕ್ಡೌನ್ ಇರುವುದರಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದರು.
ಈದ್ ನಿಮತ್ತ ಪರಿಸ್ಪರ ಶುಭಾಶಯಕ್ಕಾಗಿ ಕೈ ಕುಲುಕುವುದು, ತಬ್ಬಿಕೊಳ್ಳುವುದನ್ನು ತಪ್ಪಿಸಬೇಕು. ಕಂಟೇನ್ಮೆಂಟ್ ಪ್ರದೇಶದಲ್ಲಿ ಈ ರೀತಿ ಶುಭಾಶಯ ಯಾವುದೇ ಕಾರಣಕ್ಕೂ ಕೋರಬಾರದು. ಈದ್ಗಾಗಳಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ. ಎಲ್ಲರೂ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಹಬ್ಬದ ಅಂಗವಾಗಿ ಬಲವಂತವಾಗಿ ಯಾವುದೇ ಮನೆ ಹಾಗೂ ಅಂಗಡಿ ಎದುರು ಫ್ಲೆಕ್ಸ್ಗಳನ್ನು ಹಾಕುವುದು ಅಪರಾಧ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಸಂದರ್ಭದಲ್ಲಿ ಬೈಕ್ಗಳನ್ನು ತರದೇ ಎಲ್ಲರೂ ಕಾಲ್ನಡಿಗೆಯಲ್ಲೇ ಬರಬೇಕೆಂದರು.
ಮನೆ ಮಹಡಿ ಮೇಲೆ ಅವಕಾಶ ಕಲ್ಪಿಸಿ: ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಮುಖಂಡರು ದರ್ಗಾದಲ್ಲಿ ಅಥವಾ ಮನೆ ಮಹಡಿ ಮೇಲೆ ನಿರ್ದಿಷ್ಟ ಸಂಖ್ಯೆಯಲ್ಲಿ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿದರು. ಮತ್ತೆ ಕೆಲವರು ನಗರದಲ್ಲಿ ಕನಿಷ್ಠ 7ರಿಂದ 8 ದರ್ಗಾಗಳಿವೆ. ಒಂದೊಂದು ದರ್ಗಾದಲ್ಲಿ ಕನಿಷ್ಠ 50 ಜನ ಸೇರಿ ನಮಾಜು ಮಾಡಲು ಅವಕಾಶ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಲಾಕ್ಡೌನ್ ಇರುವ ಕಾರಣ ಸಾಮೂಹಿಕ ನಮಾಜು ಮಾಡಲು ಅವಕಾಶವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಎಎಸ್ಪಿ ಜಯಪ್ರಕಾಶ್ ಇದ್ದರು.