ಕಲಬುರಗಿ: ನಗರದ ಮೋಮಿನ್ಪುರ ಬಡಾವಣೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿಸಿಕೊಳ್ಳುವ ಕುಟುಂಬಗಳಿಗೆ ಆಹಾರ ಧಾನ್ಯ ಸೇರಿ ಅಗತ್ಯ ಸೌಕರ್ಯ ನೀಡಬೇಕೆಂದು ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಅಜಗರ್ ಚುಲಬುಲ್ ಆಗ್ರಹಿಸಿದ್ದಾರೆ.
ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ.ಜಬ್ಬಾರ್ ನೇತೃತ್ವದಲ್ಲಿ 15, 16, 24, 25, 26 ಮತ್ತು 27 ವಾರ್ಡಗಳ ಕಂಟೇನ್ಮೆಂಟ್ ಜೋನ್ ಬಡಾವಣೆಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆ ಒಳಪಟ್ಟಿರುವ ಪ್ರದೇಶದಲ್ಲಿ ಆಟೋ ಚಾಲಕರು, ಟೇಲರ್ಸ್ , ತರಕಾರಿ ವ್ಯಾಪಾರಿ ಸೇರಿ ಸಣ್ಣ ಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡ ಕುಟುಂಬಗಳು ವಾಸಿಸುತ್ತಿವೆ. ಈ ಜನರು ಲಾಕ್ಡೌನ್ನಿಂದ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಡಾವಣೆ ಜನರಿಗೆ ಪಡಿತರ ಧಾನ್ಯ ಮತ್ತು ಇತರೆ ಸಾಮಾಗ್ರಿಗಳ ಕಿಟ್ ವಿತರಿಸಬೇಕೆಂದು ಒತ್ತಾಯಿಸಿದರು.
28 ದಿನ ಪೂರೈಸಿದ ಕಂಟೇನ್ಮೆಂಟ್ ವಲಯವನ್ನು ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಮಾತನಾಡಿ, ಶೀಘ್ರದಲ್ಲಿ ಕಂಟೇನ್ಮೆಂಟ್ ಜೋನ್ನಲ್ಲಿರುವ ಎಲ್ಲ ಬಡವರ ಪಟ್ಟಿಯನ್ನು ಸಿದ್ಧಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 28 ದಿನ ಪೂರ್ಣಗೊಳಿಸಿದ ಜೋನ್ ತೆರವುಗೊಳಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಪಾಸಣೆ ನಡೆಸಿದ ಜನರು ಆತಂಕದಲ್ಲಿದ್ದು, ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿರುವ ಕಂಟೇನ್ಮೆಂಟ್ ಜೋನ್ ಪಟ್ಟಿ ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಬ್ಬಾರ್ ತಿಳಿಸಿದರು.ಸಿಪಿಐ ಅಸ್ಲಂ ಬಾಷಾ, ಶಕೀಲ್ ಅಂಗಡಿ, ಪಿ.ಎಸ್.ಐ ವಾಹೇದ್ ಅಲಿ ಕೋತ್ವಾಲ್, ಅಬ್ದುಲ್ ರಹೀಮ್ ಮಿಚರ್ಿ, ಹಾರೂನ್ ಜರ್ದಾ , ಆಲಂದಾರ ಇದ್ದರು.