More

    ಸಾಗರ ಮಾರಿಕಾಂಬಾ ಜಾತ್ರೆಗೆ ಅದ್ದೂರಿ ತೆರೆ

    ಸಾಗರ: ಐತಿಹಾಸಿಕ ಪ್ರಸಿದ್ಧ ಸಾಗರ ಶ್ರೀ ಮಾರಿಕಾಂಬಾ ದೇವಿಯ ಒಂಬತ್ತು ದಿನಗಳ ಜಾತ್ರೆಯು ದೇವಿಯನ್ನು ವನಕ್ಕೆ ಬಿಡುವ ಮೂಲಕ ಸಂಪನ್ನಗೊಂಡಿತು.
    ಬುಧವಾರ ರಾತ್ರಿ ಆರಂಭವಾದ ಶ್ರೀ ದೇವಿಯ ವೈಭವಯುತ ರಾಜಬೀದಿ ಉತ್ಸವ ಗುರುವಾರ ಬೆಳಗ್ಗೆ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಅಂತ್ಯವಾಯಿತು. ಒಂಬತ್ತು ದಿನಗಳ ವಿಶೇಷ ಪೂಜಾ ವಿಧಿ ವಿಧಾನಗಳ ನಂತರ ಬುಧವಾರ ರಾತ್ರಿ ಮಾರಿಕಾಂಬಾ ಜಾತ್ರೆಯು ಮುಕ್ತಾಯಗೊಂಡಿದ್ದು ಮಧ್ಯರಾತ್ರಿ ನಂತರ ದೇವಿಯ ಆಕರ್ಷಕ ಮೂರ್ತಿಯನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವನಕ್ಕೆ ಬಿಡಲಾಯಿತು. ರಾಜಬೀದಿ ಉತ್ಸವದಲ್ಲಿ ಡೊಳ್ಳು ತಂಡಗಳು, ವೇಷಭೂಷಣಗಳ ನೃತ್ಯ ಕಲಾವಿದರು, ವಿವಿಧ ವಾದ್ಯಗಳ ತಂಡದವರು ಪಾಲ್ಗೊಂಡಿದ್ದರು. ಸಾವಿರಾರು ಜನರು ಮಧ್ಯರಾತ್ರಿ ಆರಂಭಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡರು.
    ಮೂರು ವರ್ಷಗಳ ಹಿಂದಿನ ಶ್ರೀ ಮಾರಿಕಾಂಬಾ ಜಾತ್ರೆಯು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ ಜಾತ್ರೆ ಆಗಿತ್ತು. ಆದರೆ ಈ ವರ್ಷ ನಡೆದ ಜಾತ್ರೆಯು ಎಲ್ಲ ಜಾತ್ರೆಗಳನ್ನು ಮೀರಿಸಿತ್ತು. ಬರೋಬ್ಬರಿ 15ರಿಂದ 18 ಲಕ್ಷಕ್ಕೂ ಅಧಿಕ ಜನರು ಜಾತ್ರೆಗೆ ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ. ಎಲ್ಲ ವ್ಯವಸ್ಥೆಯೂ ಅಚ್ಚುಕಟ್ಟಾಗಿ ಮಾಡಿದ್ದು ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಾತ್ರಾ ಸಮಿತಿ, ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
    ಸಾಗರದ ನಗರಸಭೆ ಆವರಣದಲ್ಲಿ ಮಾರಿಕಾಂಬಾ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ನಡೆಯಿತು. ಸಾಗರದ ರವಿವರ್ಮ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ಎಲ್ಲರ ಗಮನ ಸೆಳೆದವು. ಸಾಗರ ಜೇನುಗೂಡು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸುರೇಖಾ ಹೆಗ್ಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಗುಂಡೂಮನೆ ವಂಶವಾಹಿನಿ ಯಕ್ಷಮೇಳದಿಂದ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts