ಹುಕ್ಕೇರಿ: ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿರಬೇಕು. ಆಗ ಮಾತ್ರ ಸದಸ್ಯರಿಗೆ ಗುಣಮಟ್ಟದ ಸೇವೆ ದೊರಕಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ನೇರ್ಲಿ ಗ್ರಾಮದ ಬಸವೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ, ರೈತ ಸೇವಾ ಕೇಂದ್ರ ಮತ್ತು ಉಗ್ರಾಣ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 10 ವರ್ಷಗಳ ಹಿಂದೆ ಪ್ರಾರಂಭವಾದ ಈ ಪಿಕೆಪಿಎಸ್ ಕಟ್ಟಡವನ್ನು ಆತ್ಮ ನಿರ್ಭರ್ ಭಾರತ ಯೋಜನೆಯಡಿ ನಿರ್ಮಿಸಲಾಗಿದೆ ಎಂದರು.
ತಾಲೂಕಿನ ಎಲ್ಲ ಪಿಕೆಪಿಎಸ್ ಮತ್ತು ಸಹಕಾರಿ ಸಂಘ ಸಂಸ್ಥೆಗಳ ಆರ್ಥಿಕ ವ್ಯವಹಾರವನ್ನು ನಾನು ಸ್ವತಃ 2 ತಿಂಗಳಿಗೊಮ್ಮೆ ಪರಿಶೀಲಿಸುತ್ತೇನೆ. ಅದರಿಂದ ನಮ್ಮ ತಾಲೂಕಿನಲ್ಲಿ ಸಹಕಾರಿ ಕ್ಷೇತ್ರ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಜತೆಗೆ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ನಿಸ್ವಾರ್ಥದಿಂದ ಹಾಗೂ ಸದಸ್ಯರು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿರುವುದರಿಂದ ಇತರರಿಗೆ ಮಾದರಿಯಾಗುವಂತೆ ನಮ್ಮ ತಾಲೂಕು ಸಹಕಾರಿ ಕ್ಷೇತ್ರದಲ್ಲಿ ಹೆಸರಾಗಿದೆ ಎಂದರು.
ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷೆ ಸುಜಾತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾಳಗೆ, ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಎಪಿಎಂಸಿ ಅಧ್ಯಕ್ಷ ವಿಜಯ ಶೇರೇಕರ, ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲಣ್ಣ ಚೌಗಲಾ,
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಭಾಸ ಪಾಟೀಲ, ಗಿರೀಶ ಪಾಟೀಲ, ಡಿಸಿಸಿ ಬ್ಯಾಂಕ್ ನಿರೀಕ್ಷಕ ಮಂಜುನಾಥ ಹಡಾಡಿ, ಎಸ್.ಪದ್ಮನ್ನವರ, ರವೀಂದ್ರ ಪಾಟೀಲ ಇತರರು ಇದ್ದರು.