ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹುರುಳಿಸಾಲನ ಸರ್ಕಾರಿ ಹಾಡಿ ಭೂಮಿ ಸರ್ವೆ ಕಾರ್ಯಕ್ಕೆ ಸ್ಥಳೀಯ ಅತಿಕ್ರಮಣದಾರರು ಸೋಮವಾರ ವಿರೋಧ ವ್ಯಕ್ತಪಡಿಸಿದ್ದಾರೆ.
ಹುರಳಿಸಾಲನ ಹಾಡಿ ಸರ್ವೆ ಸಂಖ್ಯೆ 105, 106, 107ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಬೆಳಗ್ಗೆ ಸರ್ವೆ ಕಾರ್ಯ ಆರಂಭಿಸಿದ್ದರು. ಆದರೆ, ಅತಿಕ್ರಮಣ ತೆರವಿಗೆ ಇಲಾಖೆ ಮುಂದಾಗಿದೆ ಎಂದು ಆತಂಕಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದರು. ‘ನಾವು 30 ವರ್ಷಗಳಿಂದ ಇಲ್ಲಿಯೇ ಮನೆ ಕಟ್ಟಿಕೊಂಡು ಇದ್ದು, ಸ್ಥಳೀಯ ಆಡಳಿತಕ್ಕೆ ತೆರಿಗೆ ಭರಣ ಮಾಡುತ್ತಿದ್ದೇವೆ. ಸ್ಥಳೀಯ ಆಡಳಿತ ರಸ್ತೆ, ಚರಂಡಿ, ವಿದ್ಯುತ್ ಸೇರಿ ಮೂಲಸೌಕರ್ಯಗಳನ್ನು ಒದಗಿಸಿದೆ. ಯಾವುದೇ ನೋಟಿಸ್ ನೀಡದೇ ಸರ್ವೆ ನಡೆಸಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು. ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡು, ಸ್ಥಳೀಯರನ್ನು ಚದುರಿಸಿ ಸರ್ವೆ ಕಾರ್ಯವನ್ನು ಮುಂದುವರಿಸಲಾಯಿತು.
ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಮೇರೆಗೆ ಹುರುಳಿಸಾಲ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಇದನ್ನು ತಡೆಯುವುದು ಕಾನೂನು ಬಾಹಿರವಾಗುತ್ತದೆ.
| ಎಸ್. ರವಿಚಂದ್ರ ತಹಸೀಲ್ದಾರ್
ಸರ್ಕಾರಿ ಹಾಡಿ ಭೂಮಿಯಲ್ಲಿ ಕಳೆದ 25- 30 ವರ್ಷಗಳಿಂದ ಬಡವರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈಗ ಕಂದಾಯ ಅಧಿಕಾರಿ, ಸಿಬ್ಬಂದಿ ಏಕಾಏಕಿ ಸರ್ವೆ ಕಾರ್ಯಕ್ಕೆ ಆಗಮಿಸಿದ್ದಾರೆ. ಅವರ ಉದ್ದೇಶ ಏನು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ನಮಗೆ ಆತಂಕವಾಗುತ್ತಿದೆ.
| ಮೋಹನ ಅತಿಕ್ರಮಣದಾರ