ಬೀದರ್: ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಮಾಡುತ್ತಿದೆ ಎಂದು ಫೌಂಡೇಷನ್ ಅಧ್ಯಕ್ಷರೂ ಆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವ ಮಾಹಿತಿಯನ್ನು ಒಳಗೊಂಡ `ವಸುದೈವ ಕುಟುಂಬಕಂ’ ಪುಸ್ತಕ ವಿತರಿಸಿ ಮಾತನಾಡಿದ ಅವರು, ಈಗಾಗಲೇ ಬೀದರ್ ಉತ್ತರ ಕ್ಷೇತ್ರದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮನೆ-ಮನೆ ಅಭಿಯಾನ ಮಾಡಿ ದಾಖಲೆ ಪಡೆದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರ್ಹ ಫಲಾನುಭವಿಗಳ ಮನೆಗೆ ಸರ್ಕಾರದ ವಿವಿಧ ಸೌಲಭ್ಯಗಳ ಪ್ರಮಾಣಪತ್ರ ತಲುಪಿಸಲಾಗಿದೆ ಎಂದರು.
ಲಭ್ಯವಿರುವ ಯೋಜನೆ, ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆ ಸೇರಿ ಸಂಪೂರ್ಣ ಮಾಹಿತಿಯನ್ನು ವಸುದೈವ ಕುಟುಂಬಕಂ ಒಳಗೊಂಡಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನೇರವಾಗಿ ಸಂಬಂಸಿದ ಇಲಾಖೆ ವೆಬ್ ಸೈಟ್ ನೋಡುವ ಸೌಲಭ್ಯವೂ ಇದರಲ್ಲಿದೆ ಎಂದ ನಾಗಮಾರಪಳ್ಳಿ, ವಕೀಲರಿಗೆ ಜನಸಂಪರ್ಕ ಅಧಿಕ. ವಿವಿಧ ವರ್ಗದ ಜನ ಭೇಟಿಯಾಗುತ್ತಾರೆ. ಕಷ್ಟ ತೋಡಿಕೊಳ್ಳುತ್ತಾರೆ. ಅರ್ಹರಿಗೆ ಸೌಲಭ್ಯ ತಲುಪಿಸಲು ನೆರವಾಗುವ ವಸುದೈವ ಕುಟುಂಬಕಂ ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಲು ತಿಳಿಸಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಬಾಬುರಾವ್ ಬಿರಾದಾರ್ ವಲ್ಲೇಪುರೆ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ್, ಉಪಾಧ್ಯಕ್ಷ ಕಂಟೆಪ್ಪ ಧನ್ನೂರ, ಖಜಾಂಚಿ ಭರತಕುಮಾರ ಗುಮ್ಮಾ, ಹಿರಿಯ ನ್ಯಾಯವಾದಿಗಳಾದ ಅಶೋಕ ಕರಂಜಿ, ಧೂಳಪ್ಪ, ಕೆ.ಎಚ್. ಪಾಟೀಲ್, ವಿಜಯಕುಮಾರರಡ್ಡಿ, ಉಮ್ರಾವತಿ ಇತರರಿದ್ದರು.