ಚನ್ನಮ್ಮ ಕಿತ್ತೂರು, ಬೆಳಗಾವಿ: ರಾಜ್ಯ ಕಟ್ಟಿ, ಪ್ರಜೆಗಳ ರಕ್ಷಣೆಯೇ ಪರಮ ಧ್ಯೇಯವನ್ನಾಗಿ ಮಾಡಿಕೊಂಡು ತ್ಯಾಗ, ಬಲಿದಾನಗಳ ಮೂಲಕ ಭಾರತದ ಮನುಕುಲ ಉನ್ನತಿಗೆ ಶ್ರಮಿಸಿದ ಕ್ಷತ್ರಿಯರು ಇಂದು ಜಾತಿ ಒಳ ಪಂಗಡಗಳಿಂದ ಛಿದ್ರವಾಗಿ ಹಂಚಿಹೋಗಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಕ್ಷತ್ರಿಯ ಸಮುದಾಯದ ಉಳಿವಿಗಾಗಿ ಒಗ್ಗಟ್ಟು ಅನಿವಾರ್ಯ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯ ಸಂಚಾಲಕ ತಾರಾಸಿಂಗ್ ಹೇಳಿದರು.
ಪಟ್ಟಣದ ಸೂರ್ಯ ದೇವಾಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ತಾಲೂಕಿನ ಕ್ಷತ್ರಿಯ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು. ರಾಜಾಳ್ವಿಕೆಯ ನಂತರದಲ್ಲಿ ಅನೇಕ ಕಾರಣದಿಂದ ಒಗ್ಗಟ್ಟಿಲ್ಲದೆ, ಸಂಘಟನೆಯಿಲ್ಲದೆ, ರಾಜಕೀಯ, ಶೈಕ್ಷಣಿಕ, ಔದ್ಯಮಿಕ ಮತ್ತು ಸಾಮಾಜಿಕವಾಗಿ ನಾವು ಹಿಂದೆ ಉಳಿದಿದ್ದೇವೆ. ರಾಜ್ಯದಲ್ಲಿ ಕ್ಷತ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ರಾಜಕೀಯ ಪ್ರಜ್ಞೆಯ ಕೊರತೆಯಿಂದಾಗಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುರೇಶ ಕಲಾಲ ಮಾತನಾಡಿ, ಹುಟ್ಟಿದ ಮನುಷ್ಯ ತನ್ನ ಸಮಾಜಕ್ಕಾಗಿ ಏನನ್ನಾದರೂ ಕೊಡುಗೆ ಕೊಡಬೇಕು. ಈ ನಿಟ್ಟಿನಲ್ಲಿ ನಾವು ಬದುಕುವ ಅವಶ್ಯಕತೆ ಇದೆ. ಸಮಾಜದ ಬೆಳವಣಿಗೆಗೆ ಸದಾ ಕೈ ಜೋಡಿಸುತ್ತೇನೆ ಎಂದರು. ಜಿಪಂ ಮಾಜಿ ಸದಸ್ಯ ಶಿವನಸಿಂಗ್ ಮೊಕಾಶಿ, ರಾಧಾ ಕಾದ್ರೊಳ್ಳಿ, ನಿವೃತ್ತ ಜಿಲ್ಲಾಧಿಕಾರಿ ಕೆ.ಎಚ್.ಕಾಕನೂರು, ಮುಖಂಡ ಸುಭಾಷ ಹಲಗತ್ತಿ, ವಿಜಯಕುಮಾರ ಸಿಂಧೆ, ಮಹಾದೇವ ಸಿಂಗ ಮಾತನಾಡಿದರು.
ಶಿವನಗೌಡ ಪಾಟೀಲ, ಶ್ಯಾಮ ಕಾದ್ರೊಳ್ಳಿ, ಇಂದ್ರಜಿತ ಗಿರಿ, ಸ್ವರಾಜ ಚವ್ಹಾಣ, ಪ್ರವೀಣ ಗಿರಿ, ರಮೇಶ ಮೊಕಾಶಿ, ಕುಮಾರ ಪರದೇಶಿ, ನಿಂಗನಗೌಡ ಪಾಟೀಲ, ಪ್ರಕಾಶ ಪಾಟೀಲ ಇತರರು ಇದ್ದರು.