ನೆಲಮಂಗಲ: ಜೀವನದುದ್ದಕ್ಕೂ ವಿವಿಧ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮಹಿಳೆಯರು ಸಮಾಜದ ಏಳಿಗೆಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಗುರುವಾರ ಕನ್ನಡ ಸಾಂಸ್ಕೃತಿಕ ರಂಗ ಹಾಗೂ ಶ್ರೀ ಬಸವೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಡಿ.ವಿ.ಗುಂಡಪ್ಪ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತೊಡಗಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದವರೆಗೆ ವಿವಿಧ ಸಾಧನೆ ಮಾಡಿದ್ದಾರೆ ಎಂದರು.
ಪುರಾಣ, ಇತಿಹಾಸ ಸೇರಿ ಆಧುನಿಕ ರಾಜಕಾರಣದಲ್ಲೂ ಮಹಿಳೆಯರು ದೇಶವನ್ನು ಆಳಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಮಹಿಳಾ ಶಕ್ತಿಯನ್ನು ಮನಗಂಡಿರುವ ಸರ್ಕಾರಗಳು ವಿಶೇಷ ಯೋಜನೆ ಮೂಲಕ ಸ್ತ್ರೀಸಬಲೀಕರಣಕ್ಕೆ ಮುಂದಾಗಿವೆ. ಆದ್ದರಿಂದ ಸ್ತ್ರೀ, ಪುರುಷರ ನಡುವಿನ ತಾರತಮ್ಯ ಹೋಗಲಾಡಿಸಿ ಸಮಾನತೆ ತರಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಿ.ವಿ. ಗುಂಡಪ್ಪ ಅವರ ಜನ್ಮದಿನ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಹಿರಿಯ ರಂಗಭೂಮಿ ಕಲಾವಿದೆ ಮೈಸೂರು ಮಾಲಶ್ರೀ ಮಾತನಾಡಿ, ರಂಗಭೂಮಿ ಕನ್ನಡ ಭಾಷೆಯನ್ನು ಬದುಕಿಸುವ ಕಲೆಯನ್ನು ಕಲಿಸಿಕೊಟ್ಟಿದೆ. ಅಡುಗೆಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಖ್ಯಾತ ಸಾಹಿತಿ ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗವು ಜೀವನ ಕ್ರಮವನ್ನು ತಿಳಿಸುತ್ತದೆ. ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಮಹಿಳಾ ದಿನದ ಪ್ರಯುಕ್ತ ಸಹಕಾರ ಕ್ಷೇತ್ರದ ಕೆ.ಸಿ. ವೇದಾವತಿ, ಹಿರಿಯ ಶುಶ್ರೂಷಕಿ ಶಶಿರೇಖಾ, ಪೊಲೀಸ್ ಪೇದೆ ದೀಪಿಕಾ, ಬೆಂಗಳೂರು ವಿವಿಯಿಂದ ಚಿನ್ನದ ಪದ ಪೆದುಕೊಂಡ ಫಿರೋಜಾಬಾನು ಮತ್ತು ಬಿ.ಎಸ್. ಪವಿತ್ರಾ, ಪೌರಕಾರ್ಮಿಕರಾದ ಚನ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಪ್ರಾಂಶುಪಾಲೆ ಎಚ್.ಎಸ್. ನೀಲಾ, ರಂಗಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಮುಖ್ಯಶಿಕ್ಷಕಿ ಗೌಹರ್ಜಾನ್, ಗ್ರಾಪಂ ಮಾಜಿ ಸದಸ್ಯ ಉಮೇಶ್ಗೌಡ, ಕನ್ನಡ ವಿಭಾಗದ ಮುಖ್ಯಸ್ಥೆ ಅಕ್ಕಮಹಾದೇವಿ. ಸಾಹಿತಿ ವೆಂಕಟೇಶ್ ಚೌತಾಯಿ, ಬಿಎಸ್ಎನ್ಎಲ್ ಕಾರ್ಮಿಕ ಮುಖಂಡ ಬಾಲಾಜಿ ಮತ್ತಿತರರು ಇದ್ದರು.