ಚನ್ನಮ್ಮ ಕಿತ್ತೂರು: ಸಂಗೀತ ಮತ್ತು ಸಾಹಿತ್ಯ ನಮ್ಮ ಎರಡು ಕಣ್ಣುಗಳಿದ್ದಂತೆ. ಅವೆರಡನ್ನೂ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕಲಾ ಮಂಟಪ ಮತ್ತು ಕಿತ್ತೂರಿನ ರಾಗರಂಜನಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಖ್ಯಾತ ಸಂಗೀತಗಾರ್ತಿ ಸುಜಾತಾ ಗುರವ(ಕಮ್ಮಾರ) ಸಂಗೀತ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಸಂಗೀತ ಮನಸ್ಸನ್ನು ಅರಳಿಸುವ ಸಾಧನವೂ ಹೌದು ಎಂದರು.
ನಿವೃತ್ತ ಸಂಗೀತ ಶಿಕ್ಷಕಿ ಅನುರಾಧಾ ದೇಶಪಾಂಡೆ ಮಾತನಾಡಿ, ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳದಿರುವುದು ಬೇಸರದ ಸಂಗತಿ ಎಂದರು. ಹಿರಿಯ ಸಂಗೀತಗಾರ ಸಂದೀಪ ದೇಶಪಾಂಡೆ ಮಾತನಾಡಿದರು. ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮತ್ತು ಖ್ಯಾತ ಸಂಗೀತಗಾರ್ತಿ ಸುಜಾತಾ ಗುರವ ಅವರನ್ನು ಕಿತ್ತೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಸಂಗೀತ ಶಿಕ್ಷಕರಾದ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸ್ವಾಗತಿಸಿದರು. ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ ವಂದಿಸಿದರು. ಕಲಾ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಅಪ್ಪಣ್ಣ ಪಾಗಾದ, ಶಿವಾನಂದ ಜಕಾತಿ, ದಿನೇಶ ವಳಸಂಗ, ಸೌಮ್ಯಾ ರಾಘವೇಂದ್ರ, ಪದ್ಮಾವತಿ ಗಲಗಲಿ, ಶಿಕ್ಷಕಿ ಪ್ರಭಾ ಲದ್ದಿಮಠ, ರಾಗರಂಜನಿ ಮತ್ತು ಕಲಾ ಮಂಟಪದ ಪದಾಧಿಕಾರಿಗಳು, ಧಾರವಾಡದ ಮತ್ತು ಕಿತ್ತೂರಿನ ಸಂಗೀತಾಸಕ್ತರು ಉಪಸ್ಥಿತರಿದ್ದರು. ಅಲ್ಲಮಪ್ರಭು ಕಡಕೋಳ ಮತ್ತು ವಿನೋದ ಪಾಟೀಲ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡಿದರು.