ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಶ್ರವಣಬೆಳಗೊಳ: ಕೇಂದ್ರ ಸರ್ಕಾರದ ಸ್ವಚ್ಛತಾ ಐಕಾನ್ ಸ್ಥಳವಾಗಿ ಶ್ರವಣಬೆಳಗೊಳ ಆಯ್ಕೆಯಾಗಿದ್ದು, ಎಚ್ಎಎಲ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ 34.85 ಕೋಟಿ ರೂ. ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಾನಜಿ ಯಾತ್ರಿಕಾಶ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು.
ಕುಡಿಯುವ ನೀರು ಯೋಜನೆಗೆ 1 ಕೋಟಿ ರೂ., ಇ-ಶೌಚಗೃಹ ಯೋಜನೆಗೆ 75 ಲಕ್ಷ ರೂ., ತಾಂತ್ರಿಕ ಯುಜಿಡಿ ಸ್ವಚ್ಛತಾ ಯಂತ್ರ ಗಳಿಗೆ 70 ಲಕ್ಷ ರೂ., 2 ಬೆಟ್ಟಗಳ ದ್ವಾರದಲ್ಲಿ ಚಪ್ಪಲಿ ಕೇಂದ್ರಗಳಿಗೆ 10 ಲಕ್ಷ ರೂ., ಕಸ ಎತ್ತುವ ಯಂತ್ರಗಳಿಗೆ 30 ಲಕ್ಷ ರೂ., ಪಟ್ಟಣದ ಮನೆಗಳಿಗೆ ಕಸ ಸಂಗ್ರಹಣಾ ಬಕೆಟ್ ಹಾಗೂ ಇತರ ಸಾಮಗ್ರಿ ವಿತರಣೆಗೆ 2 ಕೋಟಿ ರೂ., ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 15 ಕೋಟಿ ರೂ., ಸಿಸಿ ಟಿವಿ ಅಳವಡಿಕೆಗೆ 1.5 ಕೋಟಿ ರೂ., ಪ್ರವಾಸಿಗರಿಗೆ ದ್ವನಿ ಮಾಹಿತಿಗಾಗಿ 10 ಲಕ್ಷ ರೂ., ದ್ರವ ತ್ಯಾಜ್ಯ ವಿಲೇವಾರಿಗೆ 1 ಕೋಟಿ ರೂ., ಲಗೇಜ್ ಕೇಂದ್ರಕ್ಕೆ 1 ಕೋಟಿ ರೂ., ಪರಿಸರ ಸ್ನೇಹಿ ಯೋಜನೆಗೆ 15 ಲಕ್ಷ ರೂ., ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ 8 ಕೋಟಿ ರೂ., ಸೋಲಾರ್ ಅಳವಡಿಕೆಗೆ 3 ಕೋಟಿ ರೂ. ಹಾಗೂ ಇತರ ಅಭಿವೃದ್ಧಿಗೆ 15 ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದು, ಎಚ್ಎಎಲ್ ಸಂಸ್ಥೆಯ ಎಜಿಎಂ ಸುರೇಶ್ ಅಬ್ಬೊಜು ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್ ಪ್ರತಿಯನ್ನು ಹಸ್ತಾಂತರಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾ ಸಂಯೋಜಕ ಪರಪ್ಪಸ್ವಾಮಿ, ತಾಲೂಕು ಪಂಚಾಯಿತಿ ಇಒ ಸುನಿಲ್ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧಾ ಲೋಹಿತ್, ಸದಸ್ಯರಾದ ಶಾಲಿನಿ ಬಾಹುಬಲಿ, ಅಪ್ತಾಬ್ ಪಾಷಾ, ಸ್ವಾಮಿ, ಭಾರತಿ ಚಂದ್ರು, ಸಂಜಿತಾ ರೂಪೇಶ್, ಎಚ್ಎಎಲ್ ಸಂಸ್ಥೆಯ ಡಿಜಿಎಂ ಕುಮಾರ್ ಜೋಸೆಫ್, ಮುಖ್ಯ ವ್ಯವಸ್ಥಾಪಕ ಎಂ.ಸಾಯಿಕೃಷ್ಣ, ಪ್ರಜ್ಞಾಸೈನಿ, ಹಿರಿಯ ವ್ಯವಸ್ಥಾಪಕ ಎಸ್.ನಾಗರಾಜ್, ವ್ಯವಸ್ಥಾಪಕ ಅಶ್ವಿನ್ ಜೋಸೆಫ್, ಶ್ರೀ ಜೈನ ಮಠ ಆಡಳಿತ ಮಂಡಳಿಯ ಮುಖ್ಯ ಕಾರ್ಯದರ್ಶಿ ಎಸ್.ಪಿ.ಮಹೇಶ್ ಇತರರಿದ್ದರು.