ಕಲಬುರಗಿ: ಮಹಾನಗರಕ್ಕೆ ನಿತ್ಯ ಶುದ್ಧೀಕರಿಸಿದ ನೀರು ಸರಬರಾಜು ಮಾಡಲು ಆದೇಶಿಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳ ಯುವ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ತಿಂಗಳಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ವಾರಕ್ಕೊಮ್ಮೆ ಸರಬರಾಜು ಆಗುತ್ತಿದ್ದು, ಹೊಲಸು ನೀರು ಬರುತ್ತಿದೆ. ಚರಂಡಿ ನೀರಿನ ವಾಸನೆ ಬರುತ್ತಿದೆ. ಈ ನೀರು ಸೇವಿಸಿ ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ನೀರು ಶುದ್ಧೀಕರಣ ಸರಿಯಾಗಿ ಆಗುತ್ತಿಲ್ಲ. ಪೈಪ್ಲೈನ್ನಲ್ಲಿ ಸೋರಿಕೆಯಾಗಿ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ತೀವ್ರಗೊಳ್ಳುತ್ತಿದೆ. ಅನೇಕ ಬಾರಿ ಪಾಲಿಕೆ, ನೀರು ಸರಬರಾಜು ಮಂಡಳಿ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು.
ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಆದೇಶಿಸಬೇಕು. ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅಬ್ದುಲ್ ಅಜೀಂ ಇನಾಮದಾರ, ಪ್ರವೀಣ ಜಾಧವ್, ಜನಾಬ್ ಶಾದರ್ ಮಲಿಕ್, ಸೈಯದ್ ಅಬ್ದುಲ್ ಬಾಕರ್, ಅಫ್ಸಾನ್ ಪರ್ವೇಜ್, ಮೊಹ್ಮದ್ ಫಿರೋಜ್ ಅಹ್ಮದ್, ಎಸ್.ಎಂ.ಖಾದ್ರಿ, ಇಕ್ಬಾಲ್ ಅಹ್ಮದ್ ಇತರರಿದ್ದರು.