ಬೆಳಗಾವಿ: ಸಾಹಿತ್ಯ, ಸಂಸ್ಕೃತಿಯ ಜತೆ ಶಿಲ್ಪಕಲೆ ಬೆಳೆಸಲು ನಾವೆಲ್ಲರೂ ಶ್ರಮಿಸೋಣ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಹೇಳಿದರು. ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 2021-ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತರಬೇತಿಗಳ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಭಾವಿ ಶಿಲ್ಪ ಕಲೆಗಾರರನ್ನು ಸೃಷ್ಟಿಸುವ ಕಾರ್ಯ ಮಾಡುವ ಉದ್ದೇಶ ಹೊಂದಿದೆ ಎಂದರು. ಶಿಲ್ಪಕಲಾ ಅಕಾಡೆಮಿ ರಜಿಸ್ಟ್ರಾರ್ ಆರ್. ಚಂದ್ರಶೇಖರ ಮಾತನಾಡಿ, ಅಕಾಡೆಮಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಶಿಲ್ಪಿಗಳ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯ ಬಾಬುರಾವ್ ಎಚ್., ಉಡುಪಿ ಜಿಲ್ಲೆಯ ನರೇಶ ನಾಯ್ಕ, ಮೈಸೂರ ಜಿಲ್ಲೆಯ ಸುಮನ್ ಬಿ.ಎಸ್.ವೇಣುಗೋಪಾಲ, ಶಿವಮೊಗ್ಗ ಜಿಲ್ಲೆಯ ಅಜೇಯ ಗಜಾನನ, ಬೆಂಗಳೂರಿನ ವಿನಯ ಕುಮಾರ್ ಎಸ್., ವಿಜಯಪುರ ಜಿಲ್ಲೆಯ ಮೌನೇಶ ಆಚಾರ ಅವರಿಗೆ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ನೀಡಲಾಯಿತು.
ಉಡುಪಿ ಜಿಲ್ಲೆಯ ರತ್ನಾಕರ ಎಸ್.ಗುಡಿಗಾರ, ಬಳ್ಳಾರಿ ಜಿಲ್ಲೆಯ ಡಾ.ಪಿ. ಮುನಿರತ್ನಾಚಾರಿ, ಬಾಗಲಕೋಟೆ ಜಿಲ್ಲೆಯ ನಾಗಲಿಂಗಪ್ಪ ಗಂಗಪ್ಪ ಗಂಗೂರ, ಕಲಬುರಗಿ ಜಿಲ್ಲೆಯ ಮಾನಯ್ಯ ನಾ.ಬಡಿಗೇರ, ಬೆಂಗಳೂರಿನ ಬಿ.ಸಿ.ಶಿವಕುಮಾರ ಅವರಿಗೆ 2021ರ ಗೌರವ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಅದಕ್ಕೂ ಮುನ್ನ ವಿವಿಧ ಲೋಹ, ಕಲ್ಲು, ಮಣ್ಣು ಸೇರಿ ವಿವಿಧ ಕಲಾಕೃತಿಯ ಶಿಲ್ಪಕಲಾ ವಸ್ತುಗಳನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ್ಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ,
ಜಮಖಂಡಿ ಹಿರಿಯ ಕಲಾವಿದ ವಿಜಯ ಶಿಂಧೂರ, ವಿದ್ಯಾವತಿ ಭಜಂತ್ರಿ, ಮೈಸೂರ ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್, ಡಾ. ಸುನಂದಾ, ಮನೋಹರ ಪತ್ತಾರ ಇತರರು ಇದ್ದರು.