ಶಿಕಾರಿಪುರ: ಸೋಮವಾರ ರಾತ್ರಿಯಿಡೀ ಸುರಿದ ಮಳೆಯಿಂದ ತಾಲೂಕಿನ ಜೀವನದಿ ಕುಮದ್ವತಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ಗ್ರಾಮಾಂತರ, ರಿಪ್ಪನ್ಪೇಟೆ, ಸಾಗರ ಸುತ್ತಮುತ್ತ ಸುರಿದ ಮಳೆಯ ಪರಿಣಾಮದಿಂದ ನೀರಿನ ಹರಿವು ಹೆಚ್ಚಾಗಿ ಶಿಕಾರಿಪುರ, ಅಂಬಾರಗೊಪ್ಪ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದೆ. ಅಂಬಾರಗೊಪ್ಪ ಸುತ್ತಮುತ್ತಲಿನ ಗದ್ದೆ ಮತ್ತು ತೋಟಗಳಿಗೆ ಪ್ರವಾಹದ ನೀರು ನುಗ್ಗಿದೆ.
ಈಸೂರಿನಿಂದ ಹಿತ್ತಲ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹೆಗ್ಗೆರೆ ಕೆರೆ ಏರಿ ಒಡೆದು ಸಂಪರ್ಕ ಕಡಿತವಾಗಿದೆ. ಹಾಗಾಗಿ ದೊಡ್ಡ ವಾಹನಗಳು ಅರಿಷಿಣಗೆರೆ ಮೂಲಕ ಓಡಾಡುತ್ತಿವೆ. ಶೀಲವಂತನಕೊಪ್ಪ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಅಂಬಾರಗೊಪ್ಪ, ಸುರಗಿಹಳ್ಳಿ, ಗುಡ್ಡದ ತುಮ್ಮಿನಕಟ್ಟೆ ರಸ್ತೆ ಜಲಾವೃತವಾಗಿ ಸಂಚಾರ ಬಂದ್ ಆಗಿದೆ. ಕೋಡಿ ನೀರು ನುಗ್ಗಿ ಅಂಬ್ಲಿಗೊಳ ಎಡದಂಡೆ ಕಾಲುವೆ ಒಡೆದು ಗದ್ದೆ, ತೋಟಗಳು ಜಲಾವೃತವಾಗಿವೆ. ಕೊಪ್ಪದ ಕೆರೆ ಕೋಡಿಬಿದ್ದಿದೆ.