ಕಾರವಾರ: ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಸಂದರ್ಭ ಬಾಣಂತಿಯೊಬ್ಬಳು ಕ್ರಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮೃತಪಟ್ಟವಳ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ಸವೋದಯ ನಗರದ ಗೀತಾ ಶಿವನಾಥ ಬಾನಾವಳಿ ಮೃತರು. ಮೂರು ದಿನದ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಬೆಳಗ್ಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಕೊಠಡಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರು ಪೇರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆಕೆಯ 3 ದಿನದ ಮಗು ಹಾಗೂ ಇನ್ನೊಂದು ಚಿಕ್ಕ ಮಗು ತಬ್ಬಲಿಗಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎದುರು ಮೃತಳ ಸಂಬಂಧಿಕರ ಗೋಳಿನ ಕಟ್ಟೆ ಒಡೆದಿತ್ತು. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಅನಸ್ತೇಶಿಯಾ ಹೆಚ್ಚು ನೀಡಿದ ಪರಿಣಾಮ ಅನಾಹುತ ಸಂಭವಿಸಿದೆ. ಇದಕ್ಕೆ ವೈದ್ಯರೇ ಹೊಣೆ ಎಂದು ಆರೋಪಿಸಿ ಆಸ್ಪತ್ರೆ ಎದುರು ಸಾಕಷ್ಟು ಜನ ಸೇರಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲಕರ್ ವಿರುದ್ಧ ಘೊಷಣೆ ಕೂಗಿದರು.
ಸಿಪಿಐ ಸಂತೋಷ ಶೆಟ್ಟಿ, ಪಿಎಸ್ಐಗಳಾದ ಸಂತೋಷಕುಮಾರ್, ರೇವಣ್ಣ, ಪ್ರವೀಣಕುಮಾರ್, ಪದ್ಮಾ ದೇವಳಿ ರಕ್ಷಣೆ ನೀಡಿದರು.
ಬಾಣಂತಿಗೆ ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿತ್ತು. ಸಾಕಷ್ಟು ಪ್ರಯತ್ನ ನಡೆಸಿದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರು ಯಾವುದೇ ನಿರ್ಲಕ್ಷ್ಯಂದ ಮೃತಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ಮಾಡಲಾಗುವುದು.
ಡಾ.ಶಿವಾನಂದ ಕುಡ್ತಲಕರ್, ಜಿಲ್ಲಾ ಸರ್ಜನ್