ಕಾರವಾರ: ಜಿಲ್ಲೆಯ ಒಟ್ಟಾರೆ ಕೋವಿಡ್- 19 ಪ್ರಕರಣಗಳ ಸಂಖ್ಯೆ ಶತಕದ ಸಮೀಪಕ್ಕೆ ಬಂದು ನಿಂತಿದೆ. ಭಾನುವಾರ ಮತ್ತೆರಡು ಕರೊನಾ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 96ಕ್ಕೇರಿದೆ. ಇದುವರೆಗೆ 64 ಜನ ಗುಣಮುಖರಾಗಿದ್ದು, 32 ಸಕ್ರಿಯ ಪ್ರಕರಣಗಳಿವೆ.
ಕತಾರ್ನಿಂದ ವಾಪಸಾಗಿ, ಕರೊನಾ ಸೋಂಕಿಗೆ ತುತ್ತಾದ ಕಾರವಾರ ಕಾಜುಬಾಗದ ವ್ಯಕ್ತಿ (ಯುಕೆ-93) ಸಂಪರ್ಕಕ್ಕೆ ಬಂದ 24 ವರ್ಷದ ಮಹಿಳೆಗೆ (ಯುಕೆ-96) ರೋಗ ಖಚಿತವಾಗಿದೆ. ಇನ್ನು ಹಳಿಯಾಳಕ್ಕೂ ಕರೊನಾ ಲಗ್ಗೆ ಇಟ್ಟಿದೆ. ಜಿಲ್ಲೆಯ ಅಂಕೋಲಾ ಮಾತ್ರ ಸದ್ಯ ಕರೊನಾ ಮುಕ್ತ ಎಂಬ ಪಟ್ಟವನ್ನು ಉಳಿಸಿಕೊಂಡಿದೆ.
ಬಾಲಕನಿಗೆ ಸೋಂಕು: ಜೂನ್ 3ರಂದು ತಂದೆಯ ಜತೆಗೆ ತಮಿಳುನಾಡಿನಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 14 ವರ್ಷದ ಬಾಲಕನಲ್ಲಿ (ಯುಕೆ-95) ಭಾನುವಾರ ಸೋಂಕು ದೃಢಪಟ್ಟಿದೆ.
ಪಟ್ಟಣದ ದೇಶಪಾಂಡೆ ಆಶ್ರಯನಗರದ ಅಂಚಿನಲ್ಲಿರುವ ಸಕ್ಕರೆ ಕಾರ್ಖಾನೆ ಬಳಿಯ ತೋಟದಲ್ಲಿರುವ ಅಜ್ಜಿಯ ಮನೆಗೆ ಬಾಲಕ ಆಗಮಿಸಿದ್ದ. ಬಾಲಕನ ತಂದೆ ಮೂಲತಃ ವಿಜಯಪುರದವರಾಗಿದ್ದು, ಕೊಯಮುತ್ತೂರಿನಲ್ಲಿ ಮಗನನ್ನು ಓದಲು ಇಟ್ಟಿದ್ದರು. ಕರೊನಾದಿಂದ ಮಾರ್ಚ್ನಲ್ಲಿ ಶಾಲೆ ಮುಚ್ಚಿದ್ದರಿಂದ ಬಾಲಕನನ್ನು ಕರೆತರಲು ತಂದೆ ತೆರಳಿದ್ದರು. ಆದರೆ, ಲಾಕ್ಡೌನ್ನಿಂದ ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಕಾರಿನಲ್ಲಿ ಹಳಿಯಾಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.