More

    ವೈಭವದ ಪ್ರಸನ್ನ ಗಣಪತಿ ಮೆರವಣಿಗೆ

    ಚಿತ್ರದುರ್ಗ: ಗಣೇಶೋತ್ಸವ ಅಂಗವಾಗಿ ಪ್ರಶಾಂತ ನಗರದಲ್ಲಿ ಎಸ್‌ಟಿಆರ್ ಟೀಮ್ ಯುವಕರ ಬಳಗದಿಂದ ಪ್ರತಿಷ್ಠಾಪಿಸಿದ್ದ ಪ್ರಸನ್ನ ಗಣಪತಿ ಮೂರ್ತಿಯ ವೈಭವದ ಮೆರವಣಿಗೆ, ವಿಸರ್ಜನಾ ಮಹೋತ್ಸವ ಸೋಮವಾರ ರಾತ್ರಿ ನೆರವೇರಿತು.

    ಮುಂಜಾನೆ ಸುಪ್ರಭಾತ ಸೇವೆ, ಅಷ್ಟೋತ್ತರ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರೆ ಪೂಜಾ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

    ಮೆರವಣಿಗೆ ಅಂಗವಾಗಿ ಸ್ವಾಮಿಯ ಮೂರ್ತಿಗೆ ಬೃಹತ್ ಹೂವಿನ ಹಾರ, ಹಿಂಭಾಗದ ಪ್ರಭಾವಳಿಯನ್ನು ವಿವಿಧ ವರ್ಣದ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

    ನೂರಾರು ಯುವಕ-ಯುವತಿಯರು ಪಾಲ್ಗೊಂಡು ಡಿಜೆ ಹಾಡುಗಳ ಸದ್ದಿಗೆ ಮೈಮರೆತು ಕುಣಿದು ಸಂಭ್ರಮಿಸಿದರು. ಇದೇ ವೇಳೆ ಗಣಪತಿಗೆ ಜಯಘೋಷ ಮೊಳಗಿಸಿದರು.

    14 ದಿನ ಪ್ರತಿಷ್ಠಾಪಿಸಿದ್ದ ಗಣಪತಿ ಸನ್ನಿಧಿಯಲ್ಲಿ ರಂಗೋಲಿ ಸ್ಪರ್ಧೆ, ಆರ್ಕೆಸ್ಟ್ರಾ, ನೃತ್ಯ ಸ್ಪರ್ಧೆ ಸೇರಿ ನಿತ್ಯ ವೈವಿಧ್ಯಮಯ ಕಾರ್ಯಕ್ರಮ ಜರುಗಿದವು. ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಸುಣ್ಣದಗುಮ್ಮಿ ಸೇರಿ ಇತರೆಡೆಯ ಚಿಣ್ಣರು, ಮಹಿಳೆಯರು ಕೂಡ ಉತ್ಸಾಹದಿಂದ ಪಾಲ್ಗೊಂಡರು. ಸ್ವಾಮಿಯ ಮೂರ್ತಿ ವಿಸರ್ಜನೆ ಮೂಲಕ ಮಹೋತ್ಸವ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts