ಬೆಳಗಾವಿ: ವಿಶಾಲ ಸೌಹಾರ್ದ ಸಹಕಾರಿ ಹಾಗೂ ಪ್ರಜ್ವಲ್ ಸೌಹಾರ್ದ ಸಹಕಾರಿ ಸಂಸ್ಥೆಗಳ ಮೂಲಕ ನಿರಾಣಿ ಉದ್ಯೋಗ ಸಮೂಹ ಸಂಸ್ಥೆಯು ಸಹಕಾರ ಕ್ಷೇತ್ರದಲ್ಲಿ ಮೂಂಚೂಣಿಯಲ್ಲಿದೆ. ಅಲ್ಲದೆ, ವರ್ಷದ ಹಿಂದೆ ಜಮಖಂಡಿ ನಗರದಲ್ಲಿ ವಿಶಾಲ ಎಂಆರ್ಎನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸ್ಥಾಪಿಸಿದ್ದು, ತ್ವರಿತ ಹಾಗೂ ಉತ್ತಮ ಗುಣಮಟ್ಟದ ಹಣಕಾಸು ಸೇವೆ ವಿಸ್ತರಿಸುವುದಕ್ಕಾಗಿ ಮತ್ತೊಂದು ಶಾಖೆಯನ್ನು ಬೆಳಗಾವಿಯಲ್ಲಿ ಆರಂಭಿಸುತ್ತಿದೆ.
ನಗರದ ಕ್ಲಬ್ ರಸ್ತೆಯಲ್ಲಿರುವ ಕಾಳಿ ಅಂಬ್ರಾಯಿ ಕಟ್ಟಡದ ಮೊದಲ ಮಹಡಿಯಲ್ಲಿ ವಿಶಾಲ ಸೌಹಾರ್ದ ಶಾಖೆ ಆರಂಭಿಸಲಾಗುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಸ್ಥಳೀಯ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಅ.15ರಂದು ಶನಿವಾರ ಮಧ್ಯಾಹ್ನ 1ಕ್ಕೆ ನೆರವೇರಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಹಕಾರಿ ಅಧ್ಯಕ್ಷ ಸಂಗಮೇಶ ನಿರಾಣಿ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಸ್ವಾಮೀಜಿ ವಹಿಸಿಕೊಳ್ಳಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಸೇರಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಪ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ವಿಜಯ ಸೌಹಾರ್ದ ಸಹಕಾರಿಯು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ, ಆಧುನಿಕ ಸೌಲಭ್ಯ, ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದ ಲಾಭಾಂಶ ಹಂಚಿಕೆ, ಸುರಕ್ಷತೆಗೆ ಆದ್ಯತೆ ನೀಡಿದ ಫಲವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ ಅಗ್ರಗಣ್ಯ ಸಹಕಾರಿಗಳಲ್ಲಿ ಒಂದಾಗಿ ಬೆಳೆದಿದೆ. ಸಂಸ್ಥೆಯ ಎಲ್ಲ ಸಹಕಾರಿ ಶಾಖೆಗಳಲ್ಲಿ ಅತ್ಯುತ್ತಮ ಹಾಗೂ ನುರಿತ ಸಿಬ್ಬಂದಿ, ಕೋರ್ ಬ್ಯಾಂಕಿಂಗ್ ಸೌಲಭ್ಯ, ಹೊಸ ಯುಗದ ಬ್ಯಾಂಕಿಂಗ್ ಸೌಲಭ್ಯ, ಠೇವಣಿ ಮೇಲೆ ಆಕರ್ಷಕ ಬಡ್ಡಿದರ, ಸುರಕ್ಷೆ ಹೊಂದಿದ ಆರ್ಥಿಕ ವ್ಯವಹಾರಗಳು, ರಾಷ್ಟ್ರೀಕೃತ ಬ್ಯಾಂಕಗಳನ್ನು ಹೋಲುವ ಸೌಲಭ್ಯಗಳ ವ್ಯವಸ್ಥೆ ಇಲ್ಲಿದೆ ಎಂದು ತಿಳಿಸಿದ್ದಾರೆ.
ನಿರಾಣಿ ಉದ್ಯಮ ಸಮೂಹದಿಂದ ರೈತ ಕಲ್ಯಾಣದ ಚೈತ್ರಯಾತ್ರೆ: ರೈತರ ಮತ್ತು ಶ್ರಮಿಕರ ಕಲ್ಯಾಣದ ಸಂಕಲ್ಪ ಹೊತ್ತು ಕಳೆದ 25 ವರ್ಷಗಳ ಹಿಂದೆ ಸ್ಥಾಪಿತವಾದ ನಿರಾಣಿ ಉದ್ಯಮ ಸಮೂಹ ಇಂದು ಬೃಹದಾಕಾರವಾಗಿ ಬೆಳೆದಿದೆ. ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿಯವರ ದೂರದರ್ಶಿತ್ವ ಹಾಗೂ ಮಹತ್ವಾಕಾಂಕ್ಷಿ ಫಲವಾಗಿ ನಿರಾಣಿ ಸಮೂಹ ಇಥೆನಾಲ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲನೇ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 8 ಸಕ್ಕರೆ ಕಾರ್ಖಾನೆಗಳ ಜತೆಗೆ ಇಥೆನಾಲ್, ಸಿಎನ್ಜಿ, ಸಿಒಟು, ಶಿಕ್ಷಣ, ಬ್ಯಾಂಕಿಂಗ್, ಸಿಮೆಂಟ್, ಸೂಪರ್ ಮಾರ್ಕೆಟ್, ಫೌಂಡೇಷನ್ ಮೂಲಕ ಸಮಾಜಸೇವೆ ಜತೆಗೆ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತವಾಗಿದೆ. ನಿರಾಣಿ ಉದ್ಯಮ ಸಮೂಹದ ಮೂಲಕ 75 ಸಾವಿರ ಕುಟುಂಬಗಳಿಗೆ ನೇರವಾಗಿ ಉದ್ಯೋಗ ದೊರಕಿದರೆ, 1.20 ಲಕ್ಷ ರೈತ ಕುಟುಂಬಗಳು ನಿರಾಣಿ ಸಮೂಹದ ಜತೆಗಿವೆ ಎಂದು ಸಂಗಮೇಶ ನಿರಾಣಿ ತಿಳಿಸಿದ್ದಾರೆ.