ಆನೇಕಲ್: ಗ್ರಾಮೀಣ ಮತ್ತು ನಗರ ಪ್ರದೇಶದ ವಿಪ್ರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ರಚಿಸಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಡಳಿ ನಿರ್ದೇಶಕ ಪುರುಷೋತ್ತಮ ಹೇಳಿದರು.
ತಾಲೂಕಿನ ನೆರಳೂರಿನ ಕಾಶಿ ವಿಶ್ವೇಶ್ವರ ದೇವಾಲಯದ ಆವರಣದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್, ತ್ರಿಮತಸ್ಥ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಬುಧವಾರ ಆಯೋಜಿಸಿದ್ದ ಸಂಧ್ಯಾವಂದನೆ ಮತ್ತು ನಿತ್ಯದೇವತಾರ್ಚನೆ ತರಬೇತಿ ಶಿಬಿರದ ಸಮಾರೋಪ ಮತ್ತು ಆನೇಕಲ್ ತಾಲೂಕು ಅರ್ಚಕರು ಮತ್ತು ಪುರೋಹಿತರ ಪರಿಷತ್ನ ಉದ್ಘಾಟನಾ ಸಮಾರಂದಲ್ಲಿ ಮಾತನಾಡಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಯಾದ ಬಳಿಕ ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಲಭಿಸುವಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಹಾಯಧನ ಸಾಲ ಸೌಲಭ್ಯ, ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ವಿಶೇಷ ತರಬೇತಿ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಬೊಮ್ಮಸಂದ್ರದ ಪುರಸಭೆ ಸದಸ್ಯ ಕೆ.ಎಸ್. ಪ್ರದೀಪ್ ಮಾತನಾಡಿ, ತಾಲೂಕಿನ ಬಹುತೇಕ ಕಡೆಗಳಲ್ಲಿ ಸ್ಮಶಾನ ಜಾಗಗಳಲ್ಲಿ ಗಿಡ-ಗಂಟಿ ಬೆಳೆದು ಉಪಯೋಗಿಸಲು ಸಾಧ್ಯವಿಲ್ಲದಾಗಿದೆ. ಇನ್ಮುಂದೆ ಚುನಾಯಿತ ಪ್ರತಿನಿಧಿಗಳು, ಸರ್ಕಾರ ಮತ್ತು ಸ್ಥಳೀಯ ದಾನಿಗಳ ಸಹಕಾರದಲ್ಲಿ ಸ್ಮಶಾನ ಜಾಗಗಳನ್ನು ಸ್ವಚ್ಛಗೊಳಿಸಿ ಸುತ್ತಲೂ ಕಾಂಪೌಂಡ್ ಹಾಕಿ ಒತ್ತುವರಿಯಾಗದಂತೆ ರಕ್ಷಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆನೇಕಲ್, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ತಾಲೂಕು ಪರಿಷತ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಗೌರವಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ನ ಪ್ರಧಾನ ಸಂಚಾಲಕ ಅಚ್ಯುತಮೂರ್ತಿ, ಸಂಯೋಜಕ ಮಂಜುನಾಥ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷ ಡಿ.ಕೆ. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ನರಸಿಂಹ ಶರ್ಮ, ಆನೇಕಲ್ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಶರ್ಮಾ, ಆನೇಕಲ್ನ ಲಕ್ಷ್ಮೀನಾರಾಯಣ ಆಚಾರ, ಸಹ ಹೃದಯ ವಿಪ್ರವೃಂದದ ಅಧ್ಯಕ್ಷ ನಾಗರಾಜ್ ಮತ್ತಿತರರಿದ್ದರು.