ಚಿತ್ರದುರ್ಗ: ಪಠ್ಯ ಹಾಗೂ ಪರೀಕ್ಷಾ ಒತ್ತಡಗಳಿಂದ ವಿದ್ಯಾರ್ಥಿಗಳು ಹೊರಬರಲು ಕಾಲೇಜಿನಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಎಸ್ಜೆಎಂ ತಾಂತ್ರಿಕ ವಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ಭರತ್ ಹೇಳಿದರು.
ಮಹಾವಿದ್ಯಾಲಯದಲ್ಲಿ ಮಂಗಳವಾರದಿಂದ 3 ದಿನಗಳ ಕಾಲ ಆಯೋಜಿಸಿರುವ ‘ಸ್ಫೂರ್ತಿ’ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಂಗಳೂರು ರುದ್ರಾಕ್ಷ್ ಅಡ್ವೈಸರ್ಸ್ ಸಿಇಒ ಬಿ.ರುದ್ರಮುನಿ ಮಾತನಾಡಿ, ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಬೇಕು. ಸ್ಪರ್ಧೆಗಳಲ್ಲಿ ಸೋಲು ಕಂಡರೂ ಪ್ರಯತ್ನ ಮುಂದುವರಿಸಬೇಕು ಎಂದರು.
‘ಸ್ಫೂರ್ತಿ‘ ಮುಖ್ಯ ಸಂಚಾಲಕ ಡಾ.ಬಿ.ಜಿ.ಕುಮಾರಸ್ವಾಮಿ, ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎನ್.ಜಗನ್ನಾಥ್, ಪ್ರೊ.ಪೋರಾಳ್ ನಾಗರಾಜ್, ಡಾ.ಕೆ. ಬಿ.ಸಿದ್ದೇಶ್, ಡಾ.ಜೆ.ಎಂ.ಶ್ರೀಶೈಲ, ಡಾ.ಎಚ್.ಜೆ.ಲೋಕೇಶ್, ಪ್ರೊ.ಎ.ಪಿ.ಶಶಿಧರ್, ಡಾ.ಕೆ.ಇ.ನಿರಂಜನ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ. ಕುಮಾರಸ್ವಾಮಿ, ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ.ಟಿ.ವಿ.ಅರವಿಂದ್, ಜೆ.ಬಿ.ಸುನಿಲ್, ಪ್ರೊ.ಸುಷ್ಮಿತಾದೇಬ್ ಮತ್ತಿತರರು ಇದ್ದರು.
ಅನನ್ಯಾ ಪ್ರಾರ್ಥಿಸಿದರು. ಜೆ.ಜೀವಿತಾ ಸ್ವಾಗತಿಸಿದರು. ಸಿದ್ದೇಶ್ ಹಾಗೂ ಸಾನಿಯಾ ತಬಸ್ಸುಮ್ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಸಾಂಪ್ರದಾಯಿಕ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಮಿಂಚಿದರು.