ಕಾರವಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ರಾಜು ಪೂಜಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಪ್ರಕಾಶ ನಾಯ್ಕ, ಅನುದಾನಿತ ಶಾಲೆಗಳಲ್ಲಿ ನಿವೃತ್ತಿಯಾದ ಶಿಕ್ಷಕರ ಹುದ್ದೆಗಳನ್ನು ತುಂಬಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಇದರಿಂದ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಕೆಲವು ಶಾಲೆಗಳಲ್ಲಿ ಮುಖ್ಯಾಧ್ಯಾಪಕರು ಮಾತ್ರ ಉಳಿದುಕೊಂಡಿದ್ದಾರೆ. ಉಳಿದೆಲ್ಲರೂ ಅತಿಥಿ ಶಿಕ್ಷಕರೇ ಇದ್ದಾರೆ. ಈಗ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಿಳಿಸಿದೆ. ಆದರೆ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
1995ರ ನಂತರ ಪ್ರಾರಂಭವಾದ ಕನ್ನಡ ಶಾಲೆ ಹಾಗೂ ಕಾಲೇಜ್ಗಳಿಗೆ ಅನುದಾನ ನೀಡಬೇಕು. ಅನುದಾನಿತ ಶಾಲೆ ಶಿಕ್ಷಕರಿಗೆ ಎನ್ಪಿಎಸ್ ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿ ಮಾಡಬೇಕು. ಜ್ಯೋತಿ ಸಂಜೀವಿನಿ ವ್ಯವಸ್ಥೆಯನ್ನು ಅನುದಾನಿತ ಶಾಲೆ ಶಿಕ್ಷಕರಿಗೆ ವಿಸ್ತರಿಸಬೇಕು. ಖಾಲಿ ಹುದ್ದೆಗಳ ಭರ್ತಿಗೆ ವಿವಿಧ ಆರ್ಥಿಕ ಮಿತವ್ಯಯವನ್ನು ಹಿಂಪಡೆಯಬೇಕು. ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರ ವೇತನ ಭರಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಪ್ರಭಾಕರ ಬಿ. ಬಂಟ, ಕಾರವಾರ ತಾಲೂಕಾಧ್ಯಕ್ಷ ಜೈ ರಂಗನಾಥ, ಕಾರ್ಯದರ್ಶಿ ಆನಂದ ಘಟಕಾಂಬಳೆ, ಹೊನ್ನಾವರ ಅಧ್ಯಕ್ಷ ಗಣೇಶ ಭಟ್ಟ, ಗಣೇಶ ಬಿಷ್ಠಣ್ಣನವರ ಇತರರಿದ್ದರು.