ಹುಬ್ಬಳ್ಳಿ: ತಾಲೂಕಿನ ವರೂರಿನಲ್ಲಿರುವ ವಿಆರ್ಎಲ್ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ ‘ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರೂಪಿಸಿರುವ ಕನ್ನಡ ನಾಡು ನುಡಿಯ ಹಾಡುಗಳನ್ನು ಸಾವಿರಕ್ಕೂ ಹೆಚ್ಚು ನೌಕರರು, ಅಧಿಕಾರಿಗಳು ಹಾಡುವ ಮೂಲಕ ಇಡೀ ಆವರಣದಲ್ಲಿ ಕನ್ನಡದ ಕಂಪು ಪಸರಿಸಿದರು.
ಏಕಕಾಲಕ್ಕೆ ಎಲ್ಲ ಸಿಬ್ಬಂದಿ ಧ್ವನಿ ಗೂಡಿಸುವ ಮೂಲಕ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ತಮ್ಮ ಕನ್ನಡ ಪ್ರೇಮವನ್ನು ಅಭಿವ್ಯಕ್ತಪಡಿಸಿದರು.
ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಈ ಹಾಡುಗಳನ್ನು ವಿಆರ್ಎಲ್ ಸಿಬ್ಬಂದಿ ಹಾಡಿದರು.
ವಿಆರ್ಎಲ್ ಸಂಸ್ಥೆಯ ಸಿಎಫ್ಒ ಸುನೀಲ ನಲವಡಿ, ವಿಪಿ ಎಸ್.ಜಿ. ಪಾಟೀಲ್, ವಿಪಿ ಆರ್.ಬಿ. ಮಾಳಗಿ, ಜಿಎಂ ಬಾಪು ಮಾಕಣ್ಣವರ, ಮೀಡಿಯಾ ಡಿಜಿಎಂ ರಾಜು ಕರಿಗೌಡರ್, ಎಜಿಎಂ ಧೀರೇಂದ್ರ ಚೌಟೆ, ಡಿಜಿಎಂ ಕೆ.ಐ. ಶಿರಕೋಳ, ಕೃಷ್ಣಮೂರ್ತಿ ಭಟ್ಟ ಸೇರಿ ಸಾವಿರಾರು ಸಿಬ್ಬಂದಿ ಪಾಲ್ಗೊಂಡಿದ್ದರು.