ನೆಲಮಂಗಲ: ಕರೊನಾ ವೈರಸ್ ಸೋಂಕು ಹರಡುವಿಕೆ ತಪ್ಪಿಸಲು ಮುಂದಾಗಿರುವ ತಾಲೂಕು ಆಡಳಿತ ರಾಷ್ಟ್ರೀಯ ಹೆದ್ದಾರಿ 48ರ ಜಾಸ್ಟೋಲ್, ಲ್ಯಾಂಕೋದೇವಿಹಳ್ಳಿ ಟೋಲ್ ಸೇರಿ ಹಳೇನಿಜಗಲ್ಲು ಬಳಿ ಚೆಕ್ಪೋಸ್ಟ್ ನಿರ್ಮಿಸಿದೆ.
ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಮತ್ತು ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಹಾಗೂ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ.
ನೆಗೆಟಿವ್ ವರದಿ ಇದ್ದರೆ ಅನುಮತಿ: ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆ ಮಾಡುವಾಗ ಪ್ರಯಾಣಿಕರ ಕರೊನಾ ಪರೀಕ್ಷಾ ವರದಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನೆಗೆಟಿವ್ ವರದಿ ಇದ್ದರೆ ಮಾತ್ರ ಮುಂದಕ್ಕೆ ಹೋಗಲು ಅನುಮತಿ ನೀಡುತ್ತಿದ್ದಾರೆ. ಕರೊನಾ ವರದಿ ಇಲ್ಲದಿದ್ದರೆ ಪರೀಕ್ಷೆ ಮಾಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಸೋಂಕಿನ ಲಕ್ಷಣ ಕಂಡುಬಂದರೆ ಅಂಥವರನ್ನು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ಮಾಹಿತಿ ನೀಡಿದರು.
ಶಿಕ್ಷಕರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು: ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ತಾಲೂಕಿನ (ತುಮಕೂರು ಬೆಂಗಳೂರು ಮಾರ್ಗದ ರಾ.ಹೆ.48) ಗಡಿ ಹಳೇನಿಜಗಲ್ ಬಳಿ, (ಬೆಂಗಳೂರು ಮಂಗಳೂರು ಮಾರ್ಗದ ರಾ.ಹೆದ್ದಾರಿ 4) ಯಂಟಗಾನಹಳ್ಳಿಯ ಲ್ಯಾಂಕೋದೇವಿಹಳ್ಳಿ ಟೋಲ್, ನಗರಸಭೆ ವ್ಯಾಪ್ತಿಯ (ಬೆಂಗಳೂರು ತುಮಕೂರು ಮಾರ್ಗದ ರಾ.ಹೆ.48) ಜಾಸ್ಟೋಲ್ನಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ಆರೋಗ್ಯ, ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ಅಲ್ಲದೆ ಶಿಕ್ಷಕರನ್ನು ಕೂಡ ತಪಾಸಣೆ ಕಾರ್ಯಕ್ಕೆ ಅಲ್ಲಿ ನಿಯೋಜಿಸಲಾಗಿದೆ.