More

    ವಾರ್ತಾ ಇಲಾಖೆ ನಿಯಮಗಳ ಸರಳೀಕರಣ  -ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿಕೆ – ಪತ್ರಕರ್ತರ ರಾಜ್ಯ ಸಮ್ಮೇಳನದ ವೆಬ್‌ಸೈಟ್‌ಗೆ ಚಾಲನೆ 

    ದಾವಣಗೆರೆ: ಅರ್ಹ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ, ವಾರ್ತಾ ಇಲಾಖೆ ನಿಯಮಾವಳಿ ಸರಳೀಕರಣಗೊಳಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
    ಉದ್ದೇಶಿತ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ ಅಂಗವಾಗಿ ಇಲ್ಲಿನ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧತಾ ಸಭೆಯಲ್ಲಿ, ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.
    ಪತ್ರಕರ್ತರು ಮಾನ್ಯತಾ ಪತ್ರ, ಮಾಸಾಶನ ಇತರೆ ಸೌಲಭ್ಯ ಪಡೆಯಲಾಗದಷ್ಟು ಈಗಿರುವ ವಾರ್ತಾ ಇಲಾಖೆ ನಿಯಮಗಳು ಕಠಿಣವಾಗಿವೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯ ಮೀಸಲು ಹಣದಲ್ಲಿ ಒಂದು ರೂಪಾಯಿ ಬಳಕೆಯಾಗಿಲ್ಲ ಎಂದರು.
    ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪತ್ರಕರ್ತರ ಮಾಸಾಶನವನ್ನು ಹತ್ತು ಸಾವಿರ ರೂನಿಂದ 12 ಸಾವಿರ ರೂ.ಗೆ ಏರಿಸಲಾಗಿದ್ದು ರಾಜ್ಯದಲ್ಲಿ 249 ಪತ್ರಕರ್ತರು ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಪತ್ರಕರ್ತರು ಮೃತರಾದಲ್ಲಿ ನೀಡುತ್ತಿದ್ದ ಮೂರು ಸಾವಿರ ರೂ. ನೆರವನ್ನು 6 ಸಾವಿರ ರೂ. ಗೆ ಏರಿಕೆ ಮಾಡಲಾಗಿದೆ.
    ಪತ್ರಕರ್ತರೆಲ್ಲರೂ ಶ್ರೀಮಂತರಲ್ಲ. ಮಧ್ಯಮ ಹಾಗೂ ಬಡತನದ ಕುಟುಂಬದಿಂದ ಬಂದವರಿದ್ದಾರೆ. ಅವರೆಲ್ಲರಿಗೂ ಸೌಲಭ್ಯ ಸಿಗಬೇಕಿದೆ. ಹೀಗಾಗಿ ನಿಯಮಾವಳಿಗಳನ್ನು ಸರಳೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
    ಪೇಪರ್‌ಬಾಯ್ ಆಗಿದ್ದ ನಾನು ಸೇಹಿತರಿಂದಾಗಿ ರಾಜ್ಯ ಮಟ್ಟದ ಪತ್ರಿಕೆ ವರದಿಗಾರನಾದೆ. ಮುಖ್ಯಮಂತ್ರಿ ಮಾಧ್ಯಮ ಸಮನ್ವಯಾಧಿಕಾರಿಯಿಂದ ಇದೀಗ ಸಿಎಂ ಮಾಧ್ಯಮ ಸಲಹೆಗಾರರಾಗಿದ್ದರೆ ಹಿರಿಯರು ಇದಕ್ಕೆ ಕಾರಣ. ನನಗೂ ಪತ್ರಕರ್ತರ ಸಮಸ್ಯೆ ಬಗ್ಗೆ ಅರಿವಿದೆ. ಪತ್ರಕರ್ತರು ಯಾವುದೇ ಸಮಸ್ಯೆಗಳಿದ್ದರೂ ತಮ್ಮನ್ನು ಸಂಪರ್ಕಿಸಬಹುದು ಎಂದರು.
    ರಾಜ್ಯ ಸಮ್ಮೇಳನಕ್ಕೆ 15 ಲಕ್ಷ ರೂ.
    ಪತ್ರಕರ್ತರ ಸಮ್ಮೇಳನಕ್ಕೆ ಈ ಹಿಂದೆ ಸರ್ಕಾರದಿಂದ ನಯಾಪೈಸೆ ಅನುದಾನ ನೀಡಿರಲಿಲ್ಲ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ 15 ಲಕ್ಷ ರೂ. ನೆರವು ದೊರಕಿತ್ತು. ದಾವಣಗೆರೆಯಲ್ಲಿ ಡಿಸೆಂಬರ್‌ನಲ್ಲಿ ನಡೆಸಲಿರುವ ರಾಜ್ಯ ಸಮ್ಮೇಳನಕ್ಕೂ ಸಿಎಂ ಅವರಿಂದ 15 ಲಕ್ಷ ರೂ. ಅನುದಾನ ಕೊಡಿಸುವ ಪ್ರಯತ್ನ ಮಾಡುವುದಾಗಿ, ಸಮ್ಮೇಳನಕ್ಕೆ ಪೂರಕ ಸೌಕರ್ಯ ಒದಗಿಸುವುದಾಗಿಯೂ ಹೇಳಿದರು.
    ಪ್ರಭಾವಿ ರಾಜಕಾರಣಿಗಳಿರುವ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರ ಭವನ ಇಲ್ಲ. ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯಂತೆ ಭವನ ನಿರ್ಮಾಣ ಸಂಬಂಧದ ಕಡತವನ್ನು ಮುಂದಿನ ವಾರದ ಸಚಿವ ಸಂಪುಟದ ಸಭೆಗೆ ತರುವ ಪ್ರಯತ್ನ ಮಾಡಲಾಗುವುದು ಎಂದ ಅವರು ಮುಂದಿನ ವರ್ಷದಲ್ಲಿ ಸುಸಜ್ಜಿತ ಭವನವಾಗಲಿ ಎಂದು ಹಾರೈಸಿದರು.
    ಶೀಘ್ರ ಬಸ್‌ಪಾಸ್
    ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ನೀಡುವ ಬೇಡಿಕೆ ಬಗ್ಗೆ ಸಿಎಂ ಸೂಚನೆಯಂತೆ ವಾರ್ತಾ ಲಾಖೆ ಆಯುಕ್ತರು ಸಮಗ್ರ ವರದಿ ಸಲ್ಲಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಇದು ಜಾರಿಗೆ ಬರುವ ವಿಶ್ವಾಸವಿದೆ ಎಂದರು.
    ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿ ದಾವಣಗೆರೆಗೆ ಬಹುವರ್ಷದ ನಂತರ ರಾಜ್ಯ ಸಮ್ಮೇಳನದ ಆತಿಥ್ಯ ದೊರೆತಿದೆ. ಸುಮಾರು ಐದು ಸಾವಿರ ಪತ್ರಕರ್ತರು ಸೇರುವ ನಿರೀಕ್ಷೆ ಇದೆ ಎಂದರು.
    ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಿಕಾ ಭವನ ನಿರ್ಮಾಣ ಹಾಗೂ ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರವೇ ಕ್ಷೇಮಾಭಿವೃದ್ಧಿ ಅನುದಾನ ನೀಡುವಂತೆ ಜಿಲ್ಲಾ ಸಂಘದಿಂದ ಮನವಿ ಸಲ್ಲಿಸಲಾಯಿತು.
    ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಪೇಪರ್ ಚಂದ್ರಣ್ಣ, ಎಸ್.ಕೆ. ಒಡೆಯರ್, ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಫಕೃದ್ದೀನ್, ವಾರ್ತಾ ಇಲಾಖೆ ಅಧಿಕಾರಿ ಧನಂಜಯ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts