ನಂಜನಗೂಡು: ಚುನಾವಣೆಯಲ್ಲಿ ಬಹುಮತ ಪಡೆದು ನಮ್ಮ ಸರ್ಕಾರ ಆಳಿತಕ್ಕೆ ಬಂದ ಕೂಡಲೇ ವರುಣ ಕ್ಷೇತ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.
ಗೋಳೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವರುಣ ಕ್ಷೇತ್ರದ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಿಲ್ಲ. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಂತೆ ವರುಣ ಕ್ಷೇತ್ರವೂ ಅಭಿವೃದ್ಧಿಯಾಗಬೇಕಾದರೆ ಸೋಮಣ್ಣ ಅವರನ್ನು ಈ ಕ್ಷೇತ್ರದ ಮತದಾರರು ಆಶೀರ್ವದಿಸಬೇಕು ಎಂದರು.
ಗೋಳೂರಿನಲ್ಲಿ ಕಾರ್ಯಕರ್ತರ ಸಭೆ ಮುಗಿಯುತ್ತಿದ್ದಂತೆ ವರುಣ ಅಭ್ಯರ್ಥಿ ವಿ.ಸೋಮಣ್ಣ ಜತೆ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದರು.
ಮೈಸೂರು-ಚಾಮರಾಜನಗರ ಹೆದ್ದಾರಿಯಲ್ಲಿ ತೆರೆದ ವಾಹನದಲ್ಲಿ ಕಾರ್ಯಕರ್ತರೊಂದಿಗೆ ಸಾಗಿದ ಅವರು, ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿರುವ ವರುಣ ಚುನಾವಣಾಧಿಕಾರಿ ಗೌರವ್ ಬಳಿ ವಿ.ಸೋಮಣ್ಣ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ವಿ. ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಮಾಜಿ ಜಿಪಂ ಸದಸ್ಯ ಬಿ.ಎನ್.ಸದಾನಂದ ಸಾಥ್ ನೀಡಿದರು.