ಯಲ್ಲಾಪುರ: ಲಾಕ್ಡೌನ್ ಆರಂಭದ ದಿನದಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಚಾಲಕರಿಗೆ ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ನಾಯ್ಕ ನೇತೃತ್ವದ ಯುವಕರ ತಂಡ ನಿತ್ಯವೂ ಉಚಿತವಾಗಿ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನಿತ್ಯವೂ ಪಲಾವ್ ಮಾಡಿಸಿಕೊಂಡು ಅದನ್ನು 150ಕ್ಕೂ ಹೆಚ್ಚು ಪಾಕೆಟ್ಗಳನ್ನು ಮಾಡಿ ಪಟ್ಟಣದ ಜೋಡುಕೆರೆ ಬಳಿ ತರುತ್ತಾರೆ. ಮಧ್ಯಾಹ್ನ 1 ಗಂಟೆಯಿಂದ ಸುಮಾರು ಎರಡು ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಓಡಾಡುವ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಚಾಲಕರಿಗೆ ಪಲಾವ್ ಹಾಗೂ ನೀರಿನ ಬಾಟಲಿಯನ್ನು ಉಚಿತವಾಗಿ ನೀಡುತ್ತಾರೆ. ಕಳೆದ 24-25 ದಿನಗಳಿಂದ ಒಂದು ದಿನವೂ ತಪ್ಪದೇ ಈ ಸೇವೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಪಂ ಸದಸ್ಯ ಸತೀಶ ನಾಯ್ಕ ಅವರ ನೇತೃತ್ವದಲ್ಲಿ ಸ್ಥಳೀಯರಾದ ಶ್ರೀನಿವಾಸ ಪಟಗಾರ, ಪ್ರಶಾಂತ ನಾಯ್ಕ, ರಾಮಾ ಮರಾಠೆ ಎಂಬುವವರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯುವಕರ ತಂಡಕ್ಕೆ ಸ್ಥಳೀಯ ಮುಖಂಡರು, ಸಾರ್ವಜನಿಕರೂ ಸಹಕಾರ ನೀಡುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಜನರ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರು, ಕರೊನಾ ಹರಡದಂತೆ ಮುಂಜಾಗ್ರತೆ ವಹಿಸುತ್ತಿರುವ ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಪ್ರಮುಖರಿಗೆ ಮಾತ್ರ ಎಲ್ಲ ಸಂಘ-ಸಂಸ್ಥೆಗಳು, ಸರ್ಕಾರ ಸೌಲಭ್ಯಗಳನ್ನು ನೀಡುತ್ತಿವೆ. ಆದರೆ, ಅಗತ್ಯ ಸಾಮಗ್ರಿಗಳನ್ನು ನಮಗೆ ತಲುಪಿಸುವಲ್ಲಿ ಅವರಷ್ಟೇ ಶ್ರಮ ವಹಿಸಿ ದುಡಿಯುತ್ತಿರುವ ಶ್ರಮಿಕರಿಗೆ ಊಟ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಈ ಯುವಕರು.
ನಿರಂತರವಾಗಿ ಲಾರಿ ಚಾಲಕರಿಗೆ ಊಟ ನೀಡುವ ಕಾರ್ಯ ಮಾಡುತ್ತಿದ್ದೇವೆ. ಊಟ-ತಿಂಡಿ ಇಲ್ಲದೆ ಹೈರಾಣಾಗುವ ಅವರು, ಊಟ ನೀಡಿದ ತಕ್ಷಣ ಖುಷಿಯಿಂದ ನಮ್ಮನ್ನು ಹರಸಿ ಹೋಗುತ್ತಿದ್ದಾರೆ. ನಮ್ಮ ಶ್ರಮ ನಿಜವಾಗಿ ಸಾರ್ಥಕವಾಗುತ್ತಿದೆ ಎಂಬ ಸಂತಸವಿದೆ.
| ಸತೀಶ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯ