ಕುಂದಗೋಳ: ಕರೊನಾ ವೈರಸ್ ಮುಂಜಾಗ್ರತೆ ಕ್ರಮವಾಗಿ ಪಟ್ಟಣದಲ್ಲಿ ಜಾರಿ ಮಾಡಲಾಗಿರುವ ಲಾಕ್ಡೌನ್ ಅನ್ನು ಜಿಲ್ಲಾ ಗ್ರಾಮೀಣ ಡಿವೈಎಸ್ಪಿ ರವಿ ನಾಯಕ ಸೋಮವಾರ ಪರಿಶೀಲಿಸಿದರು.
ಪಟ್ಟಣದ ಪೊಲೀಸ್ ಠಾಣೆ ಎದುರಿನ ಅಕ್ಷಯ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಮಳಿಗೆ ಎದುರು ಸಿಲಿಂಡರ್ ಪಡೆಯಲು ಜನರು ಜಮಾಯಿಸಿದ್ದನ್ನು ಕಂಡ ಡಿವೈಎಸ್ಪಿ ರವಿ ನಾಯಕ, ಗ್ಯಾಸ್ ಸಿಲಿಂಡರ್ ಒಯ್ಯುವ ನೆಪದಲ್ಲಿ ಬೈಕ್ ಸವಾರರು ಸಂಚರಿಸುತ್ತಾರೆ. ಇದರಿಂದ ಲಾಕ್ಡೌನ್ ಕ್ರಮ ವಿಫಲವಾಗುವುದು. ಆದ್ದರಿಂದ ಮನೆ ಮನೆಗೆ ಹೋಗಿ ಸಿಲಿಂಡರ್ ವಿತರಣೆ ಮಾಡಬೇಕು ಎಂದು ಏಜೆನ್ಸಿ ಮಾಲೀಕರಿಗೆ ಸೂಚಿಸಿದರು.
ಸಾರ್ವಜನಿಕರು ಕುಂಟು ನೆಪ ಹೇಳಿ ಬೈಕ್ ಮೇಲೆ ಸುತ್ತಾಡಿದರೆ, ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು. ಸೋಂಕು ತಡೆಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರ ಕಾರ್ವಿುಕರು ಸೇರಿ ಅನೇಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಡಿವೈಎಸ್ಪಿ ರವಿ ನಾಯಕ ಹೇಳಿದರು.
ಮೆಡಿಕಲ್ ಶಾಪ್ವೊಂದರ ಎದುರು ಪರಸ್ಪರ ಅಂತರ ಕಾಯ್ದುಕೊಳ್ಳದೆ ಜನರು ಜಮಾಯಿಸಿದ್ದರಿಂದ ಇನ್ಸ್ಪೆಕ್ಟರ್ ಬಸವರಾಜ ಕಲ್ಲಮ್ಮನವರ ಅವರು ಮೆಡಿಕಲ್ ಶಾಪ್ ಮಾಲೀಕನಿಗೆ ದಂಡ ವಿಧಿಸಿದರು.
ಮಾರ್ಕೆಟ್ ರಸ್ತೆ, ಬ್ಯಾಂಕ್ ಬಸ್ ನಿಲ್ದಾಣ, ತಹಸೀಲ್ದಾರ್ ಕಚೇರಿ ರಸ್ತೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಸೇರಿ ಪಟ್ಟಣದ ಪ್ರಮುಖ ಸ್ಥಳಗಳಿಗೆ ಡಿವೈಎಸ್ಪಿ ಭೇಟಿ ನೀಡಿ, ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸಿ, ಮತ್ತಷ್ಟು ಬಿಗಿ ಕ್ರಮಕ್ಕೆ ಸೂಚಿಸಿದರು.