ಗೋಕಾಕ: ಮಾನವೀಯ ಮೌಲ್ಯಗಳನ್ನು ವೃದ್ಧಿಸುವುದರೊಂದಿಗೆ ವಿಶ್ವ ಶಾಂತಿಗಾಗಿ ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಗಳು ಶ್ರಮಿಸುತ್ತಿವೆ ಎಂದು ರೋಟರಿ ಸಂಸ್ಥೆ ಮಾಜಿ ಜಿಲ್ಲಾ ಪ್ರಾಂತಪಾಲ ಆನಂದ ಕುಲಕರ್ಣಿ ಹೇಳಿದ್ದಾರೆ.
ನಗರದ ರೋಟರಿ ರಕ್ತಭಂಡಾರದ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಗಳ ನೂತನ ಅಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಶ್ರೀ ಮಾತನಾಡಿ, ಶರಣರ ಪರಿಕಲ್ಪನೆಯಂತೆ ಸಮಾಜಸೇವೆಯಲ್ಲಿ ತೊಡಗಿರುವ ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಗಳ ಸೇವೆ ಮುಂದುವರಿಯಲಿ ಎಂದು ಆಶಿಸಿದರು. ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರನ್ನು ಹಾಗೂ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸುತ್ತಿರುವ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಅವರನ್ನು ಸತ್ಕರಿಸಲಾಯಿತು.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸತೀಶ ನಾಡಗೌಡ, ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಈಟಿ, ಖಜಾಂಚಿಯಾಗಿ ವಿಜಯಕುಮಾರ ಧುಳಾಯಿ, ಇನ್ನರವ್ಹೀಲ್ ಸಂಸ್ಥೆ ಅಧ್ಯಕ್ಷೆಯಾಗಿ ಆರತಿ ನಾಡಗೌಡ, ಕಾರ್ಯದರ್ಶಿಯಾಗಿ ಸೀತಾ ಬೆಳಗಾವಿ, ಖಜಾಂಚಿಯಾಗಿ ವಂದನಾ ವರದಾಯಿ ಸೇರಿದಂತೆ ಇತರೆ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಇನ್ನರ್ವ್ಹೀಲ್ ಸಂಸ್ಥೆ ಡಾ.ರಾಜಶ್ರೀ ಕುಲಕರ್ಣಿ, ರೋಟರಿ ಸಹಾಯಕ ಪ್ರಾಂತಪಾಲ ಮಹೇಶ ನೇರಲಿ, ನಿಕಟಪೂರ್ವ ಪದಾಧಿಕಾರಿಗಳಾದ ಗಣೇಶ ವರದಾಯಿ, ದಿಲೀಪ ಮೆಳವಂಕಿ, ಜ್ಯೋತಿ ವರದಾಯಿ, ವಿದ್ಯಾ ಗುಲ್ಲ, ಸೋಮಶೇಖರ ಮಗದುಮ್ಮ, ಮಲ್ಲಿಕಾರ್ಜುನ ಕಲ್ಲೋಳಿ, ಜಗದೀಶ ಚುನಮರಿ ಮತ್ತಿತರರು ಇದ್ದರು.