More

    ರಾಷ್ಟ್ರಭಾವ ಜಾಗೃತಗೊಳಿಸಿದ ರಾಮ

    ಕಲಬುರಗಿ: ದೇಶಾದ್ಯಂತ ರಾಮಭಕ್ತಿ ಮೂಡಿದೆ. ಒಂದು ಕಾಲದಲ್ಲಿ ರಾಮನ ಭಾವಚಿತ್ರಕ್ಕೆ ಅವಮಾನಿಸಿದ್ದ ತಮಿಳುನಾಡಿನ ಪ್ರತಿ ಗ್ರಾಮದಲ್ಲಿ ಈಗ ರಾಮನ ಆರಾಧನೆ ನಡೆಯುತ್ತಿದ್ದು, ರಾಷ್ಟ್ರದ ರಾಮ, ಭಕ್ತರ ರಾಮ, ಎಲ್ಲರ ರಾಮನಾಗಿ ರಾಷ್ಟ್ರಭಕ್ತಿ ಜಾಗೃತವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲಜಿ ಹೇಳಿದರು.

    ನಗರದ ಗೋಲ್ಡ್ ಹಬ್‌ನ ಸಿಟ್ರಾನ್ ಫಂಕ್ಷನ್ ಹಾಲ್‌ನಲ್ಲಿ ವಿಶ್ವ ಹಿಂದು ಪರಿಷತ್ ಮಹಾನಗರ ಜಿಲ್ಲಾ ಘಟಕ ಸೋಮವಾರ ಸಂಜೆ ಏರ್ಪಡಿಸಿದ್ದ `ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆ, ಹಿಂದು ಸಮಾಜದ ಮರು ಜಾಗರಣದ ಸಂಕೇತ’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ರಾಮ ಮಂದಿರ ಲೋಕಾರ್ಪಣೆ ಬಿಜೆಪಿ ಚುನಾವಣೆ ಸ್ಟಂಟ್ ಎನ್ನಲಾಗುತ್ತಿತ್ತು. ಆದರಿದು ವಿಶ್ವದ ಕೋಟ್ಯಂತರ ರಾಮಭಕ್ತರ ಕನಸಾಗಿದ್ದರಿಂದ ಮೊದಲೇ ನಿಶ್ಚಯವಾಗಿತ್ತು ಎಂದು ಸ್ಪಷ್ಟಪಡಿಸಿದರು.

    ದೇಶದಲ್ಲಿ ಹಿಂದು ಸಮಾಜ ಪರಾಕ್ರಮ ಮೆರೆಯುತ್ತಿದೆ. ನಾವು ನಿರ್ವಿರ್ಯರಲ್ಲ. ಆಕ್ರಮಣ ಮಾಡಲ್ಲ, ಮಾಡಿದರೆ ಬಿಡಲ್ಲ. ಹಿಂದುಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಯಾಕೆಂದರೆ ಜಾಗೃತರಾಗಿದ್ದಾರೆ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ಕಾಲ ಹೋಗಿದೆ ಎಂದು ಗುಡುಗಿದರು.
    ೧೯೯೨ರಲ್ಲಿ ಕಲಬುರಗಿಯಲ್ಲಿ ಮೂವರು ಪ್ರಾಣಬಿಟ್ಟರು. ನಗರದ ರಾಘವೇಂದ್ರ ಕಾಲನಿಯಲ್ಲಿ ಯುವತಿ ಮೇಲೆ ಕೈ ಹಾಕಲಾಯಿತು. ಚೂರಿ ಇರಿಯಲಾಯಿತು. ಎಲ್ಲೆಡೆ ಗಲಭೆ ಆಗುತ್ತಿದ್ದವು. ಯಾವಾಗ ಹಿಂದು ವಾಪಸ್ ಉತ್ತರ ಕೊಡಲು ಶುರು ಮಾಡಿದ್ದನೋ ಗಲಭೆ ಶಾಂತವಾಯಿತು. ನಮ್ಮ ಸಹನೆ ದೌರ್ಬಲ್ಯವಾಗಬಾರದು ಎಂದು ಹೇಳಿದರು.

    ಯಳಸಂಗಿಯ ಶ್ರೀ ಪರಮಾನಂದ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿಮುತ್ಯಾ, ಶಿಲ್ಪಿ ಮಾನಯ್ಯ ಬಡಿಗೇರ, ಉದ್ದಿಮೆದಾರ ರಾಘವೇಂದ್ರ ಮೈಲಾಪುರ, ವಿಎಚ್‌ಪಿ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪ, ಪ್ರಮುಖರಾದ ಶಿವಕುಮಾರ ಬೋಳಶೆಟ್ಟಿ, ಶ್ರೀಮಂತ ನವಲದಿ, ಅಶ್ವಿನಕುಮಾರ ಡಿ., ಕೃಷ್ಣಾಜಿ ಜೋಶಿ, ವಿಜಯಮಹಾಂತೇಶ, ಸುಭಾಷ ಕಾಂಬಳೆ, ಅಂಬರೀಶ ಸುಲೇಗಾಂವ, ಪ್ರಶಾಂತ ಗುಡ್ಡಾ, ಲಕ್ಷ್ಮೀಕಾಂತ ಜೋಳದ, ಮನೀಶ ವೈಕುಂಠ, ಶಿವಕಾಂತ ಮಹಾಜನ್, ರಮೇಶ ಬಂಧು, ಸತೀಶ ಮಾಹೂರ, ರಾಜು ಭವಾನಿ ಇತರರಿದ್ದರು.

    ಶ್ವೇತಾ ಸರಾಫ್ ಸ್ವಾಗತಿಸಿದರು. ಶಿವರಾಜ ಸಂಗೋಳಗಿ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ಶರಣಬಸವೇಶ್ವರ ದೇವಸ್ಥಾನದಿಂದ ಗೋಲ್ಡ್ ಹಬ್‌ವರೆಗೆ ಶ್ರೀ ರಾಮಲಲ್ಲಾ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.

    ರಾಮರಾಜ್ಯದಲ್ಲಿ ಮಥುರಾ, ಕಾಶಿಗೆ ಮುಕ್ತಿ: ಶತಮಾನಗಳ ಕಳಂಕ ತೊಡೆದು ಹೋರಾಟ, ಬಲಿದಾನದಿಂದ ರಾಮ ಮಂದಿರ ಕನಸು ಸಾಕಾರಗೊಂಡಿದ್ದು, ಇದೀಗ ರಾಮರಾಜ್ಯದ ಸಾಕಾರಕ್ಕೆ ಶ್ರಮಿಸಬೇಕಿದೆ. ಆ ರಾಮರಾಜ್ಯದಲ್ಲಿ ಮಥುರಾ ಶ್ರೀಕೃಷ್ಣ, ಕಾಶಿ ವಿಶ್ವನಾಥ ಸೇರಿ ದೇಶದ ಎಲ್ಲ ದೇವಸ್ಥಾನಗಳು ಪುನರುಜ್ಜೀವನ ಕಂಡು ಪೂಜೆ, ಆರಾಧನೆ ನಡೆಯಬೇಕು. ಸಂತರು, ಸ್ತ್ರೀಯರಿಗೆ ಗೌರವ ಸಿಗಬೇಕು, ಮತಾಂತರ, ಲವ್ ಜಿಹಾದ್ ನಿಲ್ಲಬೇಕು, ಗೋ ರಕ್ಷಣೆ ಆಗಬೇಕು, ವಿಶ್ವದ ಜನರು ಭಾರತೀಯ ಚಿಂತನೆ ಅಳವಡಿಸಿಕೊಳ್ಳಬೇಕು. ಹಂಪಿಯ ವೈಭವ ಮರುಕಳಿಸಬೇಕು ಎಂದು ಗೋಪಾಲಜಿ ಆಶಯ ವ್ಯಕ್ತಪಡಿಸಿದರು.

    ಅಯೋಧ್ಯೆ ವಿಶ್ವದ ರಾಜಧಾನಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರದ ಅರ್ಧ ಭಾಗ ಪೂರ್ಣಗೊಂಡಿದ್ದು, ನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ. ರಾಮನ ದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಐದಾರು ವರ್ಷದಲ್ಲಿ ಅಯೋಧ್ಯೆ ವಿಶ್ವದ ರಾಜಧಾನಿ ಆಗಲಿದೆ. ಬೃಹತ್ ಟೆಂಪಲ್ ಮ್ಯೂಸಿಯಂ, ಅಖಿಲ ಭಾರತೀಯ ಸ್ತರದ ಮ್ಯೂಸಿಯಂ, ಸೂರಜಕುಂಡ, ಭರತಕುಂಡ, ನಂದಿಗ್ರಾಮ, ಸೂರ್ಯ ದೇವಸ್ಥಾನ, ದಶರಥ ಕುಂಡ, ವಿಭೀಷಣ ಕುಂಡ ಸೇರಿ ಅಯೋಧ್ಯೆಯ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಕ್ಷೇತ್ರದ ದರ್ಶನ ಪಡೆಯುವಂತೆ ಮಾಡಲಾಗುತ್ತಿದೆ ಎಂದು ಗೋಪಾಲಜಿ ಹೇಳಿದರು.

    ಕಲಬುರಗಿಯ ಮಾನಯ್ಯ ಬಡಿಗೇರ ಮೂರ್ತಿ ಸಲಹಾ ಸಮಿತಿ ಸಭೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಲಿಂಗರಾಜ ಅಪ್ಪ ಪ್ರಾಣ ಪ್ರತಿಷ್ಠಾಪನೆಯಲ್ಲಿ ದಂಪತಿ ಸಮೇತ ಭಾಗವಹಿಸಿದ್ದರು. ಅನುಸೂಚಿತ ಜಾತಿಯ ರಾಮಭಕ್ತ ಪ್ರತಿಷ್ಠಾಪನೆ ದಿನ ಗರ್ಭಗೃಹದಲ್ಲಿದ್ದ. ಸರ್ವರ ರಾಮ, ಸಮರಸತೆಯ ಭಾವ ಎಲ್ಲರದಾಗಲಿ.
    | ಗೋಪಾಲಜಿ, ಕೇಂದ್ರೀಯ ಕಾರ್ಯದರ್ಶಿ, ವಿಎಚ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts