More

    ರಾಷ್ಟ್ರಧ್ವಜ ಹಾರಾಟ ಪ್ರಾಯೋಗಿಕ ಯಶಸ್ವಿ

    ಸಾಗರ: ನಗರದಲ್ಲಿ ಹಾರಾಡುವ 159 ಅಡಿ ಎತ್ತರದ ರಾಷ್ಟ್ರಧ್ವಜ ಸಾಗರದ ಲ್ಯಾಂಡ್ ಮಾರ್ಕ್ ಆಗಲಿದ್ದು ಈ ಜಾಗವನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

    ನಗರದ ಗಣಪತಿ ಕೆರೆ ಪಕ್ಕದಲ್ಲಿ ಸೋಮವಾರ ರಾಷ್ಟ್ರಧ್ವಜ ಹಾರಾಡುವ ಪ್ರಾಯೋಗಿಕ ಪರೀಕ್ಷೆ ಬಳಿಕ ಮಾತನಾಡಿ, ಈ ದಿನ ರಾಷ್ಟ್ರಧ್ವಜವನ್ನು ಪ್ರಾಯೋಗಿಕವಾಗಿ ಹಾರಿಸಲಾಗಿದೆ. ಅಧಿಕೃತವಾಗಿ ಆ.15ರಿಂದ ಶಾಶ್ವತವಾಗಿ ಈ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಾಡಲಿದೆ ಎಂದರು.

    30 ಅಡಿ ಅಗಲ, 45 ಅಡಿ ಎತ್ತರದ ಬೃಹತ್ ರಾಷ್ಟ್ರಧ್ವಜ ಇದಾಗಿದೆ. ರಾತ್ರಿವೇಳೆ ವಿದ್ಯುತ್ ದೀಪದ ಬೆಳಕಿನಲ್ಲಿ ಕಂಗೊಳಿಸಲಿದೆ. ವಿದ್ಯುದ್ದೀಪ ವ್ಯವಸ್ಥೆ, ಹಾರಾಟದ ಸಂದರ್ಭದಲ್ಲಿ ಆಗು ಹೋಗು ಅವಲೋಕಿಸಲು ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ. ಪ್ರತಿದಿನ ರಾಷ್ಟ್ರಧ್ವಜ ಹಾರಾಟ, ಅದಕ್ಕೆ ಘಾಸಿಯಾಗದಂತೆ ಸ್ಥಳದ ನಿರ್ವಹಣೆಗೆ ಓರ್ವರನ್ನು ನೇಮಿಸಲಾಗುವುದು ಎಂದು ಹೇಳಿದರು.

    ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ 2.5 ಎಕರೆ ಜಾಗ ಉಳಿಸಿದ್ದರಿಂದ ಇಲ್ಲಿ ರಾಷ್ಟ್ರಧ್ವಜ ಸೇರಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಗಣಪತಿ ಕೆರೆ ಸರ್ವೆ ವರದಿ ಶೀಘ್ರ ಬರಲಿದೆ. ಆರಂಭದಲ್ಲಿ ಧ್ವಜಸ್ತಂಭ ನಿರ್ವಣಕ್ಕೆ ಅಂದಿನ ಎಸಿ ದರ್ಶನ್ ಹಾಗೂ ಪೊಲೀಸ್ ಉಪ ಅಧಿಕ್ಷಕ ಯತೀಶ್ ಸಹಕಾರ ನೀಡಿದ್ದಾರೆ. ಅವರನ್ನು ಧ್ವಜಾರೋಹಣ ವೇಳೆ ಸನ್ಮಾನಿಸಲಾಗುವುದು ಎಂದರು.

    ಊರನ್ನು ಕಟ್ಟುವಲ್ಲಿ ಬಿ.ಎಸ್.ಚಂದ್ರಶೇಖರ್, ಜಿ.ಆರ್.ಜಿ.ನಗರ್, ಎಸ್.ಎಸ್.ಕುಮಟಾ, ಕೆ.ಎಂ.ಲಿಂಗಪ್ಪ, ಭೋಜಪ್ಪ ಹೀಗೆ ಹಲವರು ಶ್ರಮಿಸಿದ್ದಾರೆ. ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಎಸಿ ಡಾ. ಎಲ್.ನಾಗರಾಜ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರ ಠಾಣೆ ಸಿಪಿಐ ಅಶೋಕ್​ಕುಮಾರ್, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶಪ್ರಸಾದ್, ವಿ.ಮಹೇಶ್, ಅರವಿಂದ ರಾಯ್ಕರ್, ಮಧುರಾ ಶಿವಾನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts