ಚಿಕ್ಕೋಡಿ: ರಾಯಬಾಗ ವಿಧಾನಸಭಾ ಕ್ಷೇತ್ರದ ಬೀರನಾಳ ಸೇರಿ 16 ಗ್ರಾಮಗಳ ಕುಡಿಯುವ ನೀರಿನ ಬಹುಗ್ರಾಮ ಯೋಜನೆಗಾಗಿ 169 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು. ತಾಲೂಕಿನ ವಿಜಯನಗರ ಗ್ರಾಮ ವ್ಯಾಪ್ತಿಯಲ್ಲಿ ನೀರಾವರಿ ನಿಗಮದಿಂದ ಮಂಜೂರಾದ ಬ್ರಿಡ್ಜ್, ವಿಜಯನಗರ ಕ್ರಾಸ್ದಿಂದ ವಿಜಯನಗರ ರಸ್ತೆ ಕಾಮಗಾರಿ ಹಾಗೂ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೆಂಪಟ್ಟಿ ಸೇರಿ ನಾಲ್ಕು ಹಳ್ಳಿಗಳ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗೂ 47 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಭಾಗದ ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದಂತಾಗಿದೆ ಎಂದು ಹೇಳಿದರು. ರೈತರಿಗೆ ಅನುಕೂಲವಾಗುವ ರಸ್ತೆಗಳ ಸುಧಾರಣೆ ಜತೆಗೆ ಸಮಗ್ರ ನೀರಾವರಿ ಸೌಕರ್ಯ ಒದಗಿಸುವ ಮೂಲಕ ರಾಯಬಾಗ ವಿಧಾನ ಸಭಾಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನ್ನದಾಗಿದೆ. ಕಳಪೆ ಕಾಮಗಾರಿ ಕಂಡು ಬಂದಲ್ಲಿ ನನ್ನ ಗಮನಕ್ಕೆ ತನ್ನಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಪವನ ರಮೇಶ ಕತ್ತಿ ಮಾತನಾಡಿ, ತೋಟಪಟ್ಟಿ ರಸ್ತೆಗಳ ನಿರ್ಮಾಣದಿಂದ ರೈತರು ತಮ್ಮ ಬೆಳೆ ಮಾರುಕಟ್ಟೆಗೆ ಕಳುಹಿಸಲು ಹಾಗೂ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಅನುಕೂಲವಾಗಲಿದೆ. ಕಾರಣ, ರೈತರು ರಸ್ತೆ ನಿರ್ಮಾಣಕ್ಕೆ ಬೇಕಾಗುವಷ್ಟು ಭೂಮಿ ಕೊಟ್ಟು ಸಹಕರಿಸಬೇಕು ಎಂದರು. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ಮಹೇಶ ಪಾಟೀಲ, ಮಹಾಂತೇಶ ಶಿರಗೂರ, ಚಿದಾನಂದ ಅಥಣಿ, ರಾಜೇಶ ಶಿರಗೂರ, ಮಿಥುನ ಕತ್ತಿ, ಬಸಲಿಂಗ ಕಾಡೇಶಗೋಳ, ಎಂ.ಜಿ.ಜಿವನಿ, ಅಣ್ಣಾಸಾಹೇಬ ಖೇಮಲಾಪುರೆ ಇತರರಿದ್ದರು.