ಶಿವಮೊಗ್ಗ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಜಿಲ್ಲಾ ಶಾಖೆ, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಶಿಬಿರದಲ್ಲಿ ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿಯ ಕಾರ್ಯದರ್ಶಿ ಧರಣೇಂದ್ರ ದಿನಕರ್ 100ನೇ ಬಾರಿ ರಕ್ತದಾನ ಮಾಡಿದ ಸಾಧನೆ ಮಾಡಿದರು.
ಧರಣೇಂದ್ರ ದಿನಕರ್ ಅವರ 1986ರಿಂದ ಆರಂಭಗೊಂಡ ರಕ್ತದಾನದ ಪಯಣಕ್ಕೆ ಭಾನುವಾರ ಡಿವಿಎಸ್ ರಂಗಮಂದಿರ ಶತಕದ ಸಾಧನೆಗೆ ಸಾಕ್ಷಿಯಾಯಿತು. ರಕ್ತದಾನ ಮಾಡುವ ಮೂಲಕವೇ ಶಿಬಿರಕ್ಕೆ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ 20 ಯುವಕರು ರಕ್ತದಾನ ಮಾಡಿದ್ದು ವಿಶೇಷ.
ಅಲ್ಲದೆ ಎ.ಎಂ.ಸುರೇಶ್ 76 ಹಾಗೂ ಪರಿಸರ ರಮೇಶ್ 75ನೇ ಬಾರಿ ರಕ್ತದಾನ ಮಾಡಿದರು. ಮಹಿಳೆಯೊಬ್ಬರು ರಕ್ತ ನೀಡಿ ಇತರರಿಗೆ ಮಾದರಿಯಾದರು. ಅತಿ ಹೆಚ್ಚು ರಕ್ತದಾನ ಮಾಡಿದ 22 ವರ್ಷದೊಳಗಿನ ನಾಲ್ವರು, 70 ವರ್ಷದ ನಂತರದ 15 ಹಾಗೂ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಾಲ್ವರು ಮಹಿಳೆಯರನ್ನು ಸನ್ಮಾನಿಸಲಾಯಿತು. ರಕ್ತದಾನಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಲಾಯಿತು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಎಸ್.ಪಿ.ದಿನೇಶ್, ಉಪ ಸಭಾಪತಿಗಳಾದ ಟಿ.ಆರ್.ಅಶ್ವತ್ಥ್ನಾರಾಯಣ್, ಡಾ. ವಿ.ಎಲ್.ಎಸ್.ಕುಮಾರ್, ಸುರೇಶ್, ಜಿ.ವಿಜಯಕುಮಾರ್, ಡಾ. ಎಸ್.ದಿನೇಶ್ ಇದ್ದರು.