ಸಂಬರಗಿ: ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಯೋಧ ನ. 26ರಂದು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ಅಂತ್ಯಕ್ರಿಯೆ ನೆರವೇರಿತು. ಶಂಕರ ಮಹಾಲಿಂಗಗೌಡ ಪಾಟೀಲ (32) ಮೃತಪಟ್ಟ ಯೋಧ. ರಜೆ ಮೇಲೆ ಊರಿಗೆ ಬಂದಿದ್ದ ಯೋಧ, ಬಾಗಲಕೋಟೆ ಜಿಲ್ಲೆಯ ಸಂಸಿ ಗ್ರಾಮದ ಸಂಬಂಧಿಕರ ಮನೆಗೆ ಬೈಕ್ ಮೇಲೆ ಹೋಗಿ ಬರುವಾಗ ಟ್ರಕ್ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾದ ಗಾಯವಾಗಿತ್ತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.
ಯೋಧನ ಪಾರ್ಥಿವ ಶರೀರವನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬೆಳಗಾವಿಯ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ ಯೋಧರು ಮಿಲಿಟರಿ ಗೌರವ ಸೂಚಿಸಿದರು. ನಂತರ ಯೋಧನ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗ್ರಾಮಸ್ಥರು ಎಲ್ಲ ವ್ಯವಹಾರ ಸ್ಥಗಿತಗೊಳಿಸಿ ಗೌರವ ಸಲ್ಲಿಸಿದರು.
2008ರಿಂದ ಮದ್ರಾಸ್ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ, ಜಮ್ಮುವಿನಲ್ಲಿ 12 ವರ್ಷ ಸೇವೆ ಸಲ್ಲಿಸಿ ಮದ್ರಾಸ್ಗೆ ವರ್ಗಾವಣೆಯಾಗಿದ್ದರು. ಯೋಧನಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಬಿಜೆಪಿ ಮುಖಂಡ ಶ್ರೀನಿವಾಸ ಪಾಟೀಲ ಶ್ರದ್ಧಾಂಜಲಿ ಸಲ್ಲಿಸಿದರು.
ಬಳ್ಳಿಗೇರಿ ಶುಗರ್ಸ್ ಅಧಿಕಾರಿ ಬಸವರಾಜ ಕೋಳಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಖೋಕಲೆ, ಕೆಪಿಸಿಸಿ ಸದಸ್ಯ ಚಂದ್ರಕಾಂತ ಇಮ್ಮಡಿ, ಮುಖಂಡ ಬಾಬಾಗೌಡ ಪಾಟೀಲ, ಡಾ. ಸಿ.ಎ. ಸಂಕ್ರಟ್ಟಿ, ಕುಮಾರ ಚನ್ನರೆಡ್ಡಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಕೊಣ್ಣೂರ, ಅಶೋಕ ಕವಲಗುಟ್ಟ, ಸೋಮಲಿಂಗ ಸಂಕ್ರಟ್ಟಿ, ಕಂದಾಯ ನಿರೀಕ್ಷಕ ಟಿ.ಜಿ. ಕಲ್ಲಟ್ಟಿ, ಗ್ರಾಮ ಲೆಕ್ಕಾಧಿಕಾರಿ ಬೆಲ್ಲದಮನಿ ಇತರರು ಅಂತಿಮ ದರ್ಶನ ಪಡೆದರು.