More

    ಯಶಸ್ಸಿಗಿಂತ ಆತ್ಮತೃಪ್ತಿ ಮುಖ್ಯ

    ಧಾರವಾಡ: ಜೀನವದಲ್ಲಿ ಯಶಸ್ಸಿಗಿಂತ ಆತ್ಮತೃಪ್ತಿ ಮುಖ್ಯ ಎಂಬುದನ್ನು ತಿಳಿಯಬೇಕು. ಜೀವನದ ಅಂತಿಮ ಕ್ಷಣದವರೆಗೂ ದುಡಿಯುವ ಅವಕಾಶವಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರ. ಹೀಗಾಗಿ, ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿ ಆರೋಗ್ಯಯುತ ಸಮಾಜ ನಿರ್ವಣಕ್ಕೆ ಮುಂದಾಗಬೇಕು ಎಂದು ಎಸ್​ಡಿಎಂ ವಿವಿ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ನಗರದ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶಿಕ್ಷಣ ಪಡೆದ ಬಳಿಕ ಸಿಗುವ ಅನುಭವದಿಂದಲೇ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿದಂತೆ ಜವಾಬ್ದಾರಿ ಹೆಚ್ಚುತ್ತದೆ. ಉತ್ತಮ ಶಿಕ್ಷಣ ಸಿಕ್ಕರೆ ಜಗತ್ತನ್ನೇ ಗೆಲ್ಲಬಹುದು ಎಂಬ ಮಾತಿದೆ. ಅದರಂತೆ ಪದವಿ ಪಡೆದ ವಿದ್ಯಾರ್ಥಿಗಳು ಮುನ್ನಡೆಯಬೇಕು. ಸೇವಾ ಅವಧಿಯಲ್ಲಿ ಶಿಕ್ಷಣ ಪಡೆದ ಸಂಸ್ಥೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಹಣ ಗಳಿಕೆಗಿಂತ ಸೇವಾ ಮನೋಭಾವ ಮುಖ್ಯ ಎಂದು ಸಲಹೆ ನೀಡಿದರು.

    ಪದವಿ ಹಾಗೂ ಸ್ನಾತಕೋತ್ತರ ಸೇರಿ ಒಟ್ಟು 139 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ವಿಭಾಗದಲ್ಲಿ ಡಾ. ಆಕಾಂಕ್ಷಾ ಸಿಂಗ್ (5 ಪದಕ) ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಸೌರವ ಬಹಾದ್ದೂರಿ (1) ಚಿನ್ನದ ಪದಕ ಪಡೆದರು. ಉಪ ಕುಲಪತಿ ಡಾ. ನಿರಂಜನಕುಮಾರ, ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಲರಾಮ ನಾಯಕ, ಎಸ್​ಡಿಎಂಇ ಸೊಸೈಟಿ ಕಾರ್ಯದರ್ಶಿ ವಿ. ಜೀವಂಧರಕುಮಾರ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಡಾ. ರತ್ನಮಾಲಾ ದೇಸಾಯಿ, ಪದ್ಮಲತಾ ನಿರಂಜನಕುಮಾರ, ಯು.ಎಸ್. ದಿನೇಶ, ಇತರರು ಇದ್ದರು.

    ಪದವಿಯಲ್ಲಿ 5 ಬಂಗಾರದ ಪದಕ ಪಡೆದಿರುವುದು ಖುಷಿಯಾಗಿದೆ. ವೈದ್ಯೆಯಾಗುವ ಆಸೆ ಈಡೇರಿದೆ. ತಂದೆ ಸುರ್ಜಿತ್ ಸಿಂಗ್ ಜಾರ್ಖಂಡ್​ನ ಅಪರ ಜಿಲ್ಲಾಧಿಕಾರಿಯಾಗಿದ್ದರೆ, ತಾಯಿ ಮಾಲತಿ ಸಿಂಗ್ ಮನೆಗೆಲಸ ಮಾಡುತ್ತಾರೆ. ನಮ್ಮ ಕುಟುಂಬದಲ್ಲಿ ಯಾರೂ ವೈದ್ಯರಾಗಿರಲಿಲ್ಲ. ಮುಂದೆ ಕೃತಕ ದಂತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಇಚ್ಛೆ ಇದೆ. ಶಿಕ್ಷಣಕ್ಕೆ ಪೂರಕ ವಾತಾವರಣ ಇರುವ ಧಾರವಾಡದ ಜನರ ಸಂಸ್ಕೃತಿ ಕಂಡು ಮನೆಯಲ್ಲೇ ಇದ್ದಂತೆ ಭಾಸವಾಗಿತ್ತು.
    | ಡಾ. ಆಕಾಂಕ್ಷಾ ಸಿಂಗ್ ಚಿನ್ನದ ಹುಡುಗಿ

    ಚಿನ್ನದ ಹುಡುಗಿ: ಜಾರ್ಖಂಡನ ಡಾ. ಆಕಾಂಕ್ಷಾ ಸಿಂಗ್ ಅವರು ಎಸ್​ಡಿಎಂ ಸಂಸ್ಥೆ ಅಧ್ಯಕ್ಷ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಸ್ಥಾಪಿಸಿರುವ ಬಂಗಾರದ ಪದಕ ಸೇರಿ ಒಟ್ಟು 5 ಪದಕಗಳನ್ನು ಪಡೆದು ಅತ್ಯುತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts