ಕಲಬುರಗಿ: ಕಲಬುರಗಿ ಸಮ್ಮೇಳನ ಮಾದರಿ ಮತ್ತು ಐತಿಹಾಸಿಕ ಸಮ್ಮೇಳವನ್ನಾಗಿಸಲು ಪ್ರತಿಯೊಬ್ಬರ ಪಾತ್ರ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಾಹಿತ್ಯ ಸಮ್ಮೇಳನ ಯಶಸ್ವಿ ಮಾಡೋಣ ಎಂದು ನಾಡೋಜ ಡಾ. ಗೀತಾ ನಾಗಭೂಷಣ ಕರೆ ನೀಡಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಮತ್ತು ಎರಡು ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಅವರು,
ಇತ್ತೀಚೆಗೆ ವಿದ್ಯುನ್ಮಾನ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ವಿಲನ್ಗಳಂತೆ ಬಿಂಬಿಸುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವುದು ಬೇಸರ ತಂದಿದೆ. ಕೆಲವು ವಾಹಿನಿಗಳು ಟಿಆರ್ಪಿಗಾಗಿ ಇದನ್ನೆಲ್ಲ ಮಾಡುತ್ತಿವೆ. ಈ ಬಗ್ಗೆ ಚಿಂತನೆಗೆ ಸಮ್ಮೇಳನದಲ್ಲಿ ಗೋಷ್ಠಿ ಏರ್ಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ. ದೇವಿದಾಸ್ ಜಿ. ಮಾಲೆ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಭಾಗವಹಿಸಿದ್ದರು.
ಗೌರವ ಕಾರ್ಯದರ್ಶಿ ಡಾ. ವಿಜಯಕುಮಾರ್ ಪರುತೆ ಸ್ವಾಗತಿಸಿದರೆ, ಕೋಶಾಧ್ಯಕ್ಷ ದೌಲತ್ರಾವ್ ಪಾಟೀಲ್ ವಂದಿಸಿದರು.