ಮಾಂಜರಿ: ಸಮೀಪದ ಯಡೂರ ಗ್ರಾಮದಲ್ಲಿ ಚಿರತೆ ಪತ್ಯಕ್ಷವಾಗಿದೆ ಎಂಬ ಗ್ರಾಮಸ್ಥರ ವದಂತಿ ಹಿನ್ನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. 8 ದಿನಗಳಿಂದ ಯಡೂರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲೂ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. ಯಡೂರ ಗ್ರಾಮದ ಜಾಧವ್ ಎಂಬುವರ ಹೊಲದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ದೂರಿನನ್ವಯ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅಲ್ಲದೆ ಚಿಕ್ಕೋಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ ಗೌರಾಣಿ ನೇತೃತ್ವದ ತಂಡ ಕಬ್ಬಿನ ಹೊಲದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ಕುರಿಯೊಂದನ್ನು ಚಿರತೆ ತಿಂದಿದೆ ಎಂದು ಕುರಿಗಾಹಿ ಹಾಲಪ್ಪ ಟೆಂಗಳೆ ಅಳಲು ತೋಡಿಕೊಂಡಿದ್ದಾರೆ. ಸ್ಥಳೀಯರಾದ ಸಂಜಯ ಕೋಳಿ, ಅನಿಲ ಕೋಳಿ ಎಂಬಾತರು 5 ದಿನಗಳ ಹಿಂದೆ ಚಂದೂರಟೇಕ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆಯನ್ನು ನೋಡಿದ್ದೇವೆಂದು ತಿಳಿಸಿದ್ದರಿಂದ ಆತಂಕ ಮತ್ತಷು ಹೆಚ್ಚಿದೆ.