ರಾಣೆಬೆನ್ನೂರ: ಬಡ ರೋಗಿಗಳಿಗೆ ಅನುಕೂಲವಾಗಲಿ ಎಂದು ದಾನಿಗಳು ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಆದರೆ, ಅವುಗಳಿಗೆ ರೋಗಿಗಳೇ ಡೀಸೆಲ್ ಹಾಕಿಸಿಕೊಂಡು ಹೋಗಬೇಕು ಎಂಬ ಸರ್ಕಾರದ ಷರತ್ತಿನಿಂದಾಗಿ ಆಂಬುಲೆನ್ಸ್ಗಳು ಮೂಲೆ ಸೇರಿವೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ರೋಗಿಗಳಿಗೆ ಅನುಕೂಲವಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಅವರು, ವಿಧಾನ ಪರಿಷತ್ ಅನುದಾನದಲ್ಲಿ ತಾಲೂಕು ಆಸ್ಪತ್ರೆ, ತಾಲೂಕಿನ ತುಮ್ಮಿನಕಟ್ಟಿ ಹಾಗೂ ಮೇಡ್ಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬುಲೆನ್ಸ್ ನೀಡಿದ್ದಾರೆ. ಆದರೆ, ಆರ್. ಶಂಕರ ಅವರು ನೀಡಿದ ಮೂರು ಆಂಬುಲೆನ್ಸ್ ಗಳು ತಾಲೂಕು ಆಸ್ಪತ್ರೆಯ ರ್ಪಾಂಗ್ ಜಾಗದಲ್ಲಿಯೇ ನಿಂತಿವೆ ಹೊರತು ಈವರೆಗೂ ಬಳಕೆಯಾಗಿಲ್ಲ.
ರೋಗಿಗಳೇ ಡೀಸೆಲ್ ಹಾಕಿಸಬೇಕು: ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ದೊರೆಯುತ್ತದೆ ಎಂಬ ಕಾರಣಕ್ಕೆ ಬಡ ರೋಗಿಗಳೇ ಬರುತ್ತಾರೆ. ತಾಲೂಕು ಆಸ್ಪತ್ರೆ ಹಾಗೂ ತುಮ್ಮಿನಕಟ್ಟಿ, ಮೇಡ್ಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸೇವೆ ದೊರೆಯದಿದ್ದರೆ, ಅನಿವಾರ್ಯವಾಗಿ ರೋಗಿ ಗಳನ್ನು ದಾವ ಣಗೆರೆ ಜಿಲ್ಲಾಸ್ಪತ್ರೆ ಅಥವಾ ಹುಬ್ಬಳ್ಳಿ
ಕಿಮ್ಸ್ಗೆ ರವಾನಿಸಲಾಗುತ್ತದೆ. ಆಗ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಗಳಲ್ಲಿಯೇ ರೋಗಿಗಳನ್ನು ರವಾನಿಸಬೇಕು. ಇಂಥ ಸಮಯದಲ್ಲಿ ರೋಗಿಗಳು ಸಾಲ ಮಾಡಿಯಾದರೂ ಡೀಸೆಲ್ ಹಾಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಬಡ ರೋಗಿಗಳಿಗೆ ತುಂಗಲಾರದ ತುತ್ತಾಗಿದೆ. ತಾಲೂಕಿನಲ್ಲಿ ನಾಲ್ಕು 108 ಆಂಬುಲೆನ್ಸ್ ಗಳಿವೆ. ಆದರೆ, ಅವುಗಳು ಅಪಘಾತ ಸೇರಿ ಇತರ ತುರ್ತು ಸೇವೆಯಲ್ಲಿ ಓಡಾಡುತ್ತಿರುತ್ತವೆ. ಆದ್ದರಿಂದ ತಾಲೂಕು ಸರ್ಕಾರಿ ಆಸ್ಪತ್ರೆಯ
ರೋಗಿಗಳಿಗೆ 108 ಆಂಬುಲೆನ್ಸ್ ಗಳ ಸೇವೆ ದೊರೆಯುವುದು ಕಷ್ಟಕರವಾಗಿದೆ. ಆದ್ದರಿಂದ ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತಂದು ಸರ್ಕಾರಿ ಆಸ್ಪತ್ರೆಯ ಆಂಬು
ಲೆನ್ಸ್ಗಳಿಗೆ ಇಲಾಖೆಯಿಂದಲೇ ಡೀಸೆಲ್ ಹಾಕಿಸಿ ರೋಗಿಗಳಿಗೆ ಉಚಿತ ಸೇವೆ ಒದಗಿಸಲು ವ್ಯವಸ್ಥೆ ಕಲ್ಪಿಸಬೇಕು ಎಂಬುದು ರೋಗಿಗಳ ಆಗ್ರಹವಾಗಿದೆ.
ನಮ್ಮಲ್ಲಿ ರೊಕ್ಕ ಇಲ್ಲದ್ದರಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ಆದರೆ, ಇಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಬೇಕಾದರೆ 1,100 ರೂಪಾಯಿಯಷ್ಟು ಡೀಸೆಲ್ ಹಾಕಿಸಬೇಕು. ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುವ ನಮ್ಮಿಂದ ಇಷ್ಟೊಂದು ಹಣ ಕೊಡಲು ಸಾಧ್ಯವೇ?. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಆಂಬುಲೆನ್ಸ್ಗಳ ಸೇವೆ ಉಚಿತಗೊಳಿಸಬೇಕು.
| ನಾಗಪ್ಪ ಕಬ್ಬೇರ ಸ್ಥಳೀಯ ನಿವಾಸಿ
ಈ ಹಿಂದಿನಿಂದಲೂ ತಾಲೂಕು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ಗಳಿಗೆ ರೋಗಿಗಳೇ ಡೀಸೆಲ್ ಹಾಕಿಸಿ ಕೊಂಡು ಹೋಗುವ ವ್ಯವಸ್ಥೆಯಿದೆ. ಕಡು ಬಡವರು 108 ಆಂಬುಲೆನ್ಸ್ ಸಹಾಯ ಕೇಳುತ್ತಾರೆ. ಮಧ್ಯಮ ವರ್ಗದವರು ಆಸ್ಪತ್ರೆಯ ಆಂಬು ಲೆನ್ಸ್ಗಳಿಗೆ ಡೀಸೆಲ್ ಹಾಕಿಸಿ ಕೊಂಡು ಹೋಗುತ್ತಾರೆ. ತಾಲೂಕು ಆಸ್ಪತ್ರೆಯಲ್ಲಿರುವ ಮೂರು ಆಂಬುಲೆನ್ಸ್ ಬಳಕೆ ಕೊಂಚ ಕಡಿಮೆ.
| ಡಾ. ಪರಮೇಶ್ವರಪ್ಪ
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ