ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಒತ್ತಾಯಿಸಿದ್ದಾರೆ.
ಆಂಜನೇಯ ದಲಿತ ಸಮುದಾಯದ ಪ್ರಭಾವಿ ನಾಯಕರು. ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ದಲಿತ ಸಮುದಾಯದ ಪಾತ್ರವೂ ಹೆಚ್ಚಿನದಿದೆ. ಹೀಗಾಗಿ ಆಂಜನೇಯ ಅವರಿಗೆ ಸಚಿವ ಸ್ಥಾನ ನೀಡಿ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ದಲಿತರಿಗೆ ಫಲ ಸಿಗಬೇಕಾದರೆ ಆಂಜನೇಯ ಅವರಿಗೆ ಸಚಿವಗಿರಿ ನೀಡುವಂತೆ ಲೇಖಕ ಎಚ್.ಆನಂದ ಕುಮಾರ್ ಆಗ್ರಹಿಸಿದರು. ಬೈಲಮ್ಮ, ಕುಮಾರ್, ಹೊಳೆಯಪ್ಪ ಇತರರಿದ್ದರು.
===