ಧಾರವಾಡ: ಇಲ್ಲಿನ ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿರುವ ಶಂಕರಾಚಾರ್ಯ, ಕೃಷ್ಣಾನಂದ ಸ್ವಾಮೀಜಿ ಹಾಗೂ ಭಾಲಚಂದ್ರ ಸ್ವಾಮೀಜಿಗಳ ಶತಮಾನೋತ್ಸವ ನಿಮಿತ್ತ ಶುಕ್ರವಾರ ವಾಚಸ್ಪತಿ ಶಾಸ್ತ್ರಿಗಳಿಂದ ಶಾಂಕರಭಾಷ್ಯ ಪ್ರವಚನ, ಶಂಕರ ಭಜನಾ ಮಹಿಳಾ ಮಂಡಳ ನೇತೃತ್ವದಲ್ಲಿ ಸೌಂದರ್ಯ ಲಹರಿ ಪಾರಾಯಣ ನಡೆಯಿತು.
ನಂತರ ನಡೆದ ಮಹಿಳಾ ಗೋಷ್ಠಿಯಲ್ಲಿ ‘ರಾಷ್ಟ್ರ ನಿರ್ವಣದಲ್ಲಿ ಮಹಿಳೆಯರ ಪಾತ್ರ’ ಕುರಿತು ಮಹಿಳಾ ಮಂಡಳದ ಸದಸ್ಯೆ ಶಾರದಾ ಜೋಶಿ ಮಾತನಾಡಿ, ಋಗ್ವೇದ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನ ಹಾಗೂ ಗೌರವ ನೀಡುತ್ತಿದ್ದರು. ನಂತರ ಮಹಿಳೆಯರನ್ನು ಕಾಣುವ ದೃಷ್ಟಿ ಬದಲಾಯಿತು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಜಗತ್ತಿನ ದೃಷ್ಟಿಯನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂದರು.
ಡಾ. ಚಂದ್ರಕಲಾ ಕೊಂಡಿ ಮಾತನಾಡಿ, ಶಂಕರ ಭಗವತ್ಪಾದರ ಕೃತಿಗಳಲ್ಲಿ ಹಾಗೂ ಅದ್ವೈತ ಸಿದ್ಧಾಂತದಲ್ಲಿ ಸ್ತ್ರೀಯನ್ನು ಅದ್ವೈತ ಸ್ವರೂಪಿಣಿಯನ್ನಾಗಿ ಪ್ರತಿಪಾದಿಸಿದ್ದಾರೆ. ಅದ್ವೈತದ ಜ್ಞಾನ ಮಹಿಳೆಯರಿಗೂ ಸುಲಭವಾಗಿ ದೊರಕುವಂತೆ ಮಾಡಿದ್ದಾರೆ. ಹೀಗಾಗಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಹಿಂಜರಿಯದೆ ಮುಂದುವರಿಯಬೇಕು ಎಂದರು.
ಮೃಣಾಲ ಜೋಶಿ ಮಾತನಾಡಿದರು. ಪ್ರೇಮಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಮಹಿಳಾ ಮಂಡಳಗಳಿಂದ ರೂಪಕಗಳು ಪ್ರದರ್ಶನಗೊಂಡವು. ನಂತರ ಪಂ. ಪ್ರವೀಣ ಗೋಡಖಿಂಡಿ, ಷಡ್ಜ್ ಗೋಡಖಿಂಡಿ ಅವರಿಂದ ಕೊಳಲು ವಾದನ ನಡೆಯಿತು. ಅವರಿಗೆ ಪಂ. ಕಿರಣ ಗೋಡಖಿಂಡಿ ತಬಲಾ ಸಾಥ್ ನೀಡಿದರು.
ಮಧುಸೂದನ ಶಾಸ್ತ್ರಿ, ನಾಗೇಶ ಶಾಸ್ತ್ರಿ, ಚಂದ್ರಶೇಖರ ಶಾಸ್ತ್ರಿ, ವಿಜಯ ನಾಡಜೋಶಿ, ಆರ್.ಎಸ್. ಜೋಶಿ, ಚಿದಂಬರ ಇನಾಮದಾರ, ಶಂಕರ ಕುಲಕರ್ಣಿ, ಗಿರಿಜಾ ಕುಲಕರ್ಣಿ, ಸರಸ್ವತಿ ಜೋಶಿ, ಉಮಾ ಪುರಾಣಿಕ, ಪದ್ಮಾ ಹಂದಿಗೋಳ, ಪ್ರೇಮಾ ಭಟ್, ಇತರರು ಇದ್ದರು.