ವಿಜಯಪುರ: ಕರ್ನಾಟಕ-ಮಹಾರಾಷ್ಟ್ರದ ಗಡಿರೇಖೆಯಾಗಿ ಹರಿಯುವ ಭೀಮಾನದಿ ಪಾತ್ರದಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಶನಿವಾರ ಸುರಿದ ಧಾರಾಕಾರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಿದೆ. ಅಲ್ಲದೇ, ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಇಂಡಿ, ಚಡಚಣ, ಸಿಂದಗಿ ಹಾಗೂ ಆಲಮೇಲ ಭಾಗದ ಭೀಮಾ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಆಲಮೇಲ ತಾಲೂಕಿನ ಬಗಲೂರ ಗ್ರಾಮದ ಸೇತುವೆ ಮೇಲೆ ನೀರು ಬಂದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ನದಿ ದಂಡೆಯ ಕಡೆ ಹೋಗದಂತೆ ಸೂಚಿಸಿದ್ದಾರೆ. ಪ್ರಾಣಾಪಾಯ ಸಂಭವಿಸದಂತೆ ಮುಂಜಾಗೃತೆ ವಹಿಸಲಾಗಿದೆ. ಬಗಲೂರು ಮಾರ್ಗ ಸುಕ್ಷೇತ್ರ ಘತ್ತರಗಿಗೆ ಸಂಪರ್ಕ ಕಲ್ಪಿಸುವ ಕಾರಣ ಬಾಗಮ್ಮ ದೇವಿ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ದರ್ಶನ ಮುಂದೂಡುವಂತೆ ತಿಳಿಸಲಾಗಿದೆ.
ಉಜನಿ ಜಲಾಶಯದಿಂದ ಹೊರಹರಿವು:
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಶನಿವಾರ ರಾತ್ರಿ 60 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರಿಂದ ಭೀಮಾನದಿಯ 8 ಬ್ರಿಡ್ಜ್ ಕಂ ಬ್ಯಾರೇಜ್ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಏಳು ಬ್ಯಾರೇಜ್ಗಳ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕೇವಲ ಧೂಳಖೇಡ ಮಾರ್ಗ ಮಾತ್ರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸೊನ್ನ ಹಾಗೂ ಅಫಜಲಪುರ ಬ್ಯಾರೇಜ್ಗಳಿಂದ ಹೊರ ಹರಿವು ಇಲ್ಲದ ಕಾರಣ ಹಿನ್ನೀರು ನದಿ ಪಾತ್ರದ ಜಮೀನುಗಳಿಗೆ ನುಗ್ಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗೃತೆ ವಹಿಸಿದೆ.