ರಾಯಬಾಗ, ಬೆಳಗಾವಿ: ಮಹಾತ್ಮರ ನಡೆ-ನುಡಿಗಳನ್ನು ಆದರ್ಶವಾಗಿಟ್ಟು ಕೊಂಡು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕಿದೆ ಎಂದು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದರು.
ಪಟ್ಟಣದ ಭರಮ ಅಣ್ಣಪ್ಪ ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚೌಗುಲೆ ಸಂಸ್ಥೆಯ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಮೊಬೈಲ್ ಗೀಳಿನಿಂದ ಹೊರಬಂದು, ಒಳ್ಳೆಯ ಸಂಸ್ಕೃತಿಯೊಂದಿಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ವ್ಯಕ್ತಿಗೆ ದೈಹಿಕ ರೂಪಕ್ಕಿಂತ ಆಂತರಿಕ ವ್ಯಕ್ತಿತ್ವ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗದ ಶಿವಾನಂದ ಬೃಹನ್ಮಠದ ಸದಾಶಿವಾನಂದ ಶ್ರೀಗಳು ಮಾತನಾಡಿ, ಪ್ರತಿ ಕ್ಷೇತ್ರವು ವ್ಯಾಪಾರೀಕರಣಗೊಂಡು, ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿದು ಹೋಗುತ್ತಿವೆ ಎಂದರು.
ನಂದಿಕುರಳಿ ಪಂಚಲಿಂಗೇಶ್ವರ ತಪೋವಣದ ವೀರಭದ್ರ ಶ್ರೀಗಳು ಆಶೀರ್ವಚನ ನೀಡಿದರು. ಮಿರಜ ಬಾನು ತಾಲಿಮ ಸಂಸ್ಥೆಯವರಿಂದ ಮಲ್ಲಕಂಬ ಪ್ರದರ್ಶನ ನಡೆಯಿತು. ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ನ್ಯಾಯವಾದಿ ಎಲ್.ಬಿ.ಚೌಗುಲೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿನಯ ಚೌಗುಲೆ, ನಿರ್ದೇಶಕ ಅಮರ ನಾಗರಾಳೆ, ಡಾ.ಸುರೇಶ ಬೆಳಗಾಂವಕರ, ನಿವೃತ್ತ ಪ್ರಾಚಾರ್ಯ ವಿ.ಜಿ.ಅಷ್ಟಗಿ, ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ, ಎಸ್.ಎ.ನಾಂದಣಿ ಎಸ್.ಎಸ್.ಕಾಡಾಪೂರೆ, ಆರ್.ವೈ.ಯಮಗಾರ, ಅರ್ಜುನ ನಾಯಿಕ ಇತರರಿದ್ದರು.