ಕುಷ್ಟಗಿ: ಪಟ್ಟಣದ ಮದ್ದಾನೇಶ್ವರ ಮಠದ ಜಾತ್ರೋತ್ಸವ ನಿಮಿತ್ತ ಗುರುವಾರ ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಶ್ರೀ ಮಠದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕರಿಬಸವ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ಪಂಚಾಚಾರ್ಯ ಧ್ವಜಾರೋಹಣ ನೆರವೇರಿತು. ನಂತರ ವಟುಗಳಿಗೆ ಅಯ್ಯಚಾರ ಲಿಂಗದೀಕ್ಷೆ ನೀಡಲಾಯಿತು. ವಿವಿಧ ವಾದ್ಯ ವೃಂದ ಹಾಗೂ ಅಕ್ಕನ ಬಳಗ ಕುಂಭ ಮೇಳದೊಂದಿಗೆ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ಪುರವಂತರ ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಕೋಲಾಟ ಗಮನ ಸೆಳೆದವು. ಪಟ್ಟಣ ಸೇರಿ ಸುತ್ತಲಿನ ಗ್ರಾಮದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರೇಣುಕಾಚಾರ್ಯರ ಯುಗಮಾನೋತ್ಸವ ನಿಮಿತ್ತ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.