ಜೆಎಸ್ಎಸ್ ಮಹಾವಿದ್ಯಾಪೀಠದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಅಭಿಪ್ರಾಯ
ಎಚ್.ಡಿ.ಕೋಟೆ: ಮದ್ಯ ವ್ಯಸನಕ್ಕೆ ದಾಸರಾದವರೊಡನೆ ಆಪ್ತ ಸಮಾಲೋಚನೆ ನಡೆಸಿ ಮೂಲ ಸಮಸ್ಯೆ ಅರಿತು ಪರಿಹಾರ ನೀಡಿದರೆ ಆತ ಕುಡಿತದಿಂದ ದೂರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠ ವತಿಯಿಂದ ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಸೆ.24ರಿಂದ ಅ.3ರವರೆಗೆ ಆಯೋಜಿಸಿರುವ ಕುಡಿತ ಬಿಡಿಸುವ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಡ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿ ಕುಡಿತದ ಚಟಕ್ಕೆ ದಾಸರಾಗುತ್ತಿದ್ದು, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿ, ತಮ್ಮ ಕುಟುಂಬದ ಮರ್ಯಾದೆಯನ್ನೂ ಹಾಳು ಮಾಡುತ್ತಿದ್ದಾರೆ. ಅಂತಹ ಮದ್ಯ ವ್ಯಸನಿಗಳನ್ನು ಇಂತಹ ಶಿಬಿರಗಳಲ್ಲಿ ಕರೆತಂದು ಆಪ್ತ ಸಮಾಲೋಚನೆ ಕೊಡಿಸಿ ಅವರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರೆ ಅವರು ಖಂಡಿತ ಮದ್ಯ ವ್ಯಸನದಿಂದ ಮುಕ್ತರಾಗುತ್ತಾರೆ. ಆ ನಿಟ್ಟಿನಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಶ್ರೀಗಳ ಮಾರ್ಗದರ್ಶನದಲ್ಲಿ 2014ರಿಂದ ಉಚಿತ ಕುಡಿತ ಬಿಡಿಸುವ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ ಎಂದರು.
ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ಎನ್.ನಾಗಣ್ಣ ಮಾತನಾಡಿದರು. ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ವಿ.ಬಸವರಾಜು, ಬಸವ ಬಳಗದ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ನಾಮಧಾರಿ ಸಮಾಜದ ಅಧ್ಯಕ್ಷ ಭೀಮರಾಜು, ಸವಿತಾ ಸಮಾಜದ ಅಧ್ಯಕ್ಷ ರೇವಣ್ಣ, ಪುರಸಭೆ ಸದಸ್ಯ ಐಡಿಯಾ ವೆಂಕಟೇಶ್, ತಾಲೂಕು ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ನಂದೀಶ್ ಕುಮಾರ್, ಕುರುಬ ಸಮಾಜದ ಅನಂದ್, ಸೊಸೈಟಿ ಸಂತೋಷ್, ದಿನೇಶ್, ನಿಂಗನಾಯ್ಕ, ಸಮ್ರಾತ್ ಲಾಲ್, ಪ್ರಮೋದ್ ಮತ್ತಿತರರಿದ್ದರು.