ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣದ ಜತೆಗೆ ಮದ್ಯವರ್ಜನ ಶಿಬಿರದ ಮೂಲಕ ಮದ್ಯವ್ಯಸನಿಗಳಿಗೆ ಹೊಸ ಬದುಕು ರೂಪಿಸಿಕೊಡುತ್ತಿದೆ ಎಂದು ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ಸಮೀಪದ ಹೊಸಕಾದರವಳ್ಳಿಯ ಕೊಡಗಿನ ಶ್ರೀಗಳ ಆಶ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಚನ್ನಮ್ಮನ ಕಿತ್ತೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಾದರವಳ್ಳಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಒಂದು ವಾರ ಆಯೋಜಿಸಲಾದ 1625ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯವ್ಯಸನಿಗಳಾಗಿ ಜೀವನ ಹಾಳು ಮಾಡಿ ಕೊಳ್ಳದೆ, ಕುಟುಂಬದ ಜತೆ ಸಂತಸ, ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಜಿ. ಶೆಟ್ಟಿ ಮಾತನಾಡಿ, ದುಶ್ಚಟಗಳಿಂದ ದೂರವಿದ್ದು, ಸುಂದರ ಬದುಕು ರೂಪಿಸಲು ಶ್ರೀ ಧರ್ಮಸ್ಥಳ ಯೋಜನೆಯ ಶಿಬಿರ ಸಹಕಾರಿಯಾಗಿದೆ. ಸಾಕಷ್ಟು ಕುಟುಂಬಗಳಲ್ಲಿ ಮರಳಿ ಖುಷಿ ತಂದಿದೆ ಎಂದರು. ಜನಜಾಗೃತಿ ವೇದಿಕೆ ಧಾರವಾಡ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ನಾಗೇಶ ವೈ.ಎ. ಮಾತನಾಡಿದರು. ಶ್ರೀ ರಾಮ ಮಂದಿರದ ಗುರುಪುತ್ರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಖಂಡು ಹೈಬತ್ತಿ, ರಾಣಿ ಶುಗರ್ಸ್ ನಿರ್ದೇಶಕ ಜ್ಯೋತಿಬಾ ಹೈಬತ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಗನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಅದೃಶ್ಯಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಮುದಕಪ್ಪ ಮರಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೃಷ್ಣಾಜಿರಾವ ಕುಲಕರ್ಣಿ, ವಲಯ ಮೇಲ್ವಿಚಾರಕಿ ನಾಗರತ್ನಾ ಕಲಿಕೇರಿ ಇತರರಿದ್ದರು.