ಹೊಳೆನರಸೀಪುರ: ಮದ್ಯದ ಚಟದಿಂದ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗುತ್ತಿದ್ದು, ಇದರಿಂದ ಮುಕ್ತಗೊಳಿಸಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ನಗರಠಾಣೆ ಪಿಎಸ್ಐ ಅರುಣ್ ತಿಳಿಸಿದರು.
ಪಟ್ಟಣದ ಕೋನೇರಿ ರಾಮಶೆಟ್ಟಿ ಛತ್ರದಲ್ಲಿ ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಮದ್ಯ ವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಸಮಾಜದಲ್ಲಿನ ಪಿಡುಗುಗಳನ್ನು ಹೋಗಲಾಡಿಸುವ ಸಲುವಾಗಿ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು 1714ನೇ ಮದ್ಯವರ್ಜನ ಶಿಬಿರವಾಗಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಮದ್ಯವ್ಯಸನದಿಂದ ದೂರವಾಗಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎಸ್.ಮಲ್ಲಿಕಾರ್ಜುನ್, ಎಚ್.ಆರ್.ಅನಂತ್, ಕೆ.ಕೆ.ಮುರಳಿಧರಗುಪ್ತ, ಪುರಸಭೆ ಸದಸ್ಯ ಕೆ.ಶ್ರೀಧರ್, ಆರ್.ಬಿ.ಪುಟ್ಟೇಗೌಡ ಇತರರು ಇದ್ದರು.