ಆಯನೂರು: ಸಮೀಪದ ಸಿರಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗುರುವಾರ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೋಷಣ್ ಅಭಿಯಾನದಡಿ ಸಮತೋಲನ ಆಹಾರದ ಪ್ರಾಮುಖ್ಯತೆಗಳನ್ನು ತಿಳಿಸುವ ಪ್ರಾತ್ಯಕ್ಷಿಕೆ ನಡೆಯಿತು. ಶಾಲೆಯಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಸ್ಥಳೀಯವಾಗಿ ಸಿಗುವ ತರಕಾರಿ, ಹಣ್ಣು, ದಿನ ಬಳಕೆ ವಸ್ತುಗಳನ್ನು ಹಿರಿಯರೇ ನಾಚುವಂತೆ ಮಾರಾಟ ಮಾಡುವುದು ಹಾಗೂ ಕೊಳ್ಳುವುದು ಕಂಡುಬಂತು. ಕಾರ್ಯಕ್ರಮದಿಂದ ಮಕ್ಕಳು ಸಂತಸಗೊಂಡರು. ಮಕ್ಕಳ ವ್ಯವಹಾರ ಜ್ಞಾನಕಂಡು ಪಾಲಕರು, ಗ್ರಾಮಸ್ಥರು ಸಂತಸಗೊಂಡರು.