ಆಲಮೇಲ: ಗ್ರಾಮಿಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಗ್ರಾಮಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆ ಗುಣಾರಿ ಲೇಔಟ್ನಲ್ಲಿ ಬಸವೇಶ್ವರ ಕನ್ನಡ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಭಾನುವಾರ ಅವರು ಮಾತನಾಡಿದರು.
ಮಹತ್ವಾಕಾಂಕ್ಷೆಯ ವಿದ್ಯಾಭ್ಯಾಸದ ಗುರಿ ವಿದ್ಯಾರ್ಥಿಗಳಲ್ಲಿರಬೇಕು. ಮಾತೃ ಭಾಷಾ ಕಲಿಕೆಯಿಂದ ಮಾತ್ರ ಇದು ಸಾಧ್ಯ. ಕೀಳರಿಮೆ ಪಡದೆ ಕನ್ನಡ ಶಾಲೆಗಳಲ್ಲಿ ಕಲಿಯುವ ಮಕ್ಕಳೇ ಶ್ರೇಷ್ಠರು. ಎಲ್ಲರ ಭಾವನೆಗಳ ಅಭಿಮಾನದ ಸಂಗಮವಾಗುವ ಮೂಲಕ ಈ ಬಸವೇಶ್ವರ ಕನ್ನಡ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಸನಾತನ ವಿದ್ಯಾ ಸಂಸ್ಥೆಯಾಗಿ ಮುನ್ನಡೆಯಲಿ ಎಂದರು.
ಪಟ್ಟಣದಲ್ಲಿ 1996 ರಿಂದ ಪ್ರಾರಂಭವಾದ ಈ ಶಾಲೆ ನೂರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯದ ಜೀವನವನ್ನೇ ಬದಲಾಯಿಸಿದೆ. ಇಂತಹ ಶಾಲೆಯ ಕಟ್ಟಡಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ರೂ. ನೀಡುತ್ತೇನೆ. ಮುಂದಿನ ದಿನಮಾನದಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವೆ ಎಂದರು.
ಸಿಂದಗಿಯ ಧಮ್ಮವಿಜಯ ಬುದ್ಧ ವಿಹಾರದ ಪೂಜ್ಯ ಭಂತೆ ಸಂಘಪಾಲ, ಆಸಂಗಿಹಾಳ ಮಠದ ಶಂಕರಾನಂದ ಮಹಾರಾಜರು, ಆಲಮೇಲ ಅಳ್ಳೋಳ್ಳಿ ಹಿರೇಮಠದ ಶ್ರೀಶೈಲಯ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಯಂಟಮಾನ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಪಿಎಸ್ಐ ಕುಮಾರ ಹಾಡಕಾರ, ಸಂಸ್ಥೆಯ ಉಪಾಧ್ಯಕ್ಷ ಗುಂಡು ಮೇಲಿನಮನಿ, ಡಾ.ರಾಜೇಶ ಪಾಟೀಲ, ಪಪಂ ಸದಸ್ಯ ಅಶೋಕ ಕೊಳ್ಳಾರಿ, ರಮೇಶ ಬಂಟನೂರ, ಕೆಪಿಆರ್ ಸಕ್ಕರೆ ಕಾರ್ಖಾನೆಯ ಪಾರ್ಥೀವನ್, ಮಲ್ಲಿಕಾರ್ಜುನ ಜೋಗುರ, ಪುಂಡಲೀಕ ದೊಡಮನಿ ಹಾಗೂ ಸಂಸ್ಥೆಯ ಎಲ್ಲ ಗುರುವೃಂದ ಹಾಗೂ ಪಾಲಕ ಪ್ರತಿನಿಧಿಗಳು ಇದ್ದರು.