More

    ಭೂಗರ್ಭ ವಿದ್ಯುತ್ ಯೋಜನೆ ಬಗ್ಗೆ ಅಪೂರ್ಣ ಮಾಹಿತಿ

    ಕಾರ್ಗಲ್: ಮುಳುಗಡೆಯಿಂದ ಈವರೆಗೂ ಈ ಭಾಗದ ಜನರಿಗೆ ಶರಾವತಿ ನದಿ ಶಾಪ ಎನ್ನುವ ಭಾವನೆ ಕಾಡುತ್ತಿದೆ. ಶರಾವತಿ ನದಿ ಶಾಪವಲ್ಲ, ಅದು ವರದಾಯಿನಿ ಎನ್ನುವುದನ್ನು ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಖಾರವಾಗಿ ತಿಳಿಸಿದ್ದಾರೆ.

    ಇಲ್ಲಿನ ಸಮೀಪದ ಹೆನ್ನಿ ಭಾಗದಲ್ಲಿ ಶರಾವತಿ ಭೂಗರ್ಭ ವಿದ್ಯುತ್ ಸ್ಥಾವರ ನಿರ್ಮಾಣ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರ್ವೆ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಶರಾವತಿ ನದಿಯನ್ನು ಉಪಯೋಗಿಸಿಕೊಂಡು ಹೊಸಹೊಸ ಯೋಜನೆಗಳನ್ನು ಹೇರುವ ಮೂಲಕ ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ಈ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಬಾರದು ಎಂದು ತಿಳಿಸಿದರು.

    ಶರಾವತಿ ಭೂಗರ್ಭ ವಿದ್ಯುತ್ ಯೋಜನೆಗೆ ಸಂಬಂಧಪಟ್ಟಂತೆ ಹಸಿರು ನ್ಯಾಯಪೀಠ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರ ಸರ್ವೆಗೆ ಒಪ್ಪಿಗೆ ನೀಡಿದೆ ಎಂದು ಕೆಪಿಸಿ ಹೇಳುತ್ತಿದೆ. ಈಚೆಗೆ ಜೋಗದಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಸದಸ್ಯರು ಮತ್ತು ನಾನು ಪಾಲ್ಗೊಂಡಾಗ ಯೋಜನೆ ಕುರಿತು ಅಲ್ಪಸ್ವಲ್ಪ ಮಾಹಿತಿ ನೀಡಿದ್ದಾರೆ. ಆದರೆ ನೀಡಿದ ಮಾಹಿತಿ ಅಪೂರ್ಣವಾಗಿದೆ ಎಂದರು.

    ಯೋಜನೆಯಿಂದ ಅಪಾರ ಪ್ರಮಾಣದ ಅರಣ್ಯನಾಶವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿದ್ಯುತ್ ಸ್ಥಾವರವನ್ನು ಭೂಮಿಯೊಳಗೆ ಮಾಡಿದರೂ, ಹೆಚ್ಚು ವಿದ್ಯುತ್ ಸಾಮರ್ಥ್ಯ ಇರುವ ವಿದ್ಯುತ್ ತಂತಿಗಳನ್ನು ಎಳೆಯುವಾಗ ಸಾವಿರಾರು ಎಕರೆ ಅರಣ್ಯ ನಾಶವಾಗುವ ಜತೆಗೆ ಈ ಭಾಗದ ಜೀವವೈವಿಧ್ಯತೆ ಮೇಲೂ ದುಷ್ಪರಿಣಾಮ ಬೀರಲಿದೆ. ಯೋಜನೆಯಿಂದ ಪರಿಸರನಾಶವಾಗಲಿದ್ದು, ಈ ಭಾಗದ ಜನಜೀವನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಅಪಾರ ಪ್ರಮಾಣದ ಅರಣ್ಯ ಹಾಗೂ ಪರಿಸರನಾಶವಾಗುವ ಯೋಜನೆ ಕೈಬಿಡುವಂತೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.

    ಶರಾವತಿ ನದಿಯಿಂದ ಕೆಪಿಸಿಯವರು ಚೆನ್ನಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಭಾಗದ ಜನರಿಗೆ ಯಾವುದೆ ಸೌಲಭ್ಯ ಒದಗಿಸುತ್ತಿಲ್ಲ. ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ಕೋಟ್ಯಂತರ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದರು.

    ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಪಪಂ ಸದಸ್ಯರಾದ ನಾಗರಾಜ್ ವಾಟೆಮಕ್ಕಿ, ಪಿ.ಮಂಜುನಾಥ್, ಲಲಿತಾ ಮಂಜುನಾಥ್, ವಾಸಂತಿ ರಮೇಶ್, ಉಮೇಶ್, ಹರೀಶ್ ಗೌಡ, ಲಕ್ಷ್ಮೀರಾಜು, ಜಯಲಕ್ಷ್ಮೀ, ಸುಜಾತ ಜೈನ್, ಪ್ರಮುಖರಾದ ದೇವರಾಜ್ ಜೈನ್, ಬಿ.ಟಿ.ರವೀಂದ್ರ, ಜಗದೀಶ್, ನಾಗೇಂದ್ರ ಮಹಾಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts