ಚಿತ್ರದುರ್ಗ: ಜಿಲ್ಲೆಯ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ಅಬ್ಬಿನಹೊಳಲು ಗ್ರಾಮದ ಸಮೀಪ 1.9 ಕಿ.ಮೀ ಮಾರ್ಗ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿಗೆ ವೇಗ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ರಾಜ್ಯ ರೈತಸಂಘ ಮನವಿ ಮಾಡಿದೆ.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಯೋಜನೆ ಸಂಬಂಧ ಅಜ್ಜಂಪುರ ಸುರಂಗ ದಾಟಿ ವೈ-ಜಂಕ್ಷನ್ ನಂತರ ಅಬ್ಬಿನಹೊಳಲು ಗ್ರಾಮದ ಬಳಿ 1.9 ಕಿ.ಮೀ ಭೂಸ್ವಾಧೀನಕ್ಕೆ ರೈತರು ಪರಿಹಾರ ಪಡೆದರೂ, ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ತೀರ್ಪಿನಂತೆ ಪರಿಹಾರ ನೀಡಿ ಭೂಸ್ವಾಧೀನ ಪಡಿಸಿಕೊಂಡು ಸರ್ಕಾರ ಕಾಲುವೆ ನಿರ್ಮಿಸಿದರೆ, 61 ಕಿ.ಮೀ ನೀರು ಹರಿಯಲು ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿದರು.
ಇದರಿಂದ ಮೊದಲನೇ ಹಂತದಲ್ಲಿ ಹೊಳಲ್ಕೆರೆ ತಾಲೂಕಿನ 30 ಕೆರೆಗಳು, ಹೊಸದುರ್ಗ ತಾಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಲಿದೆ. ಬರಗಾಲದ ಹಿನ್ನೆಲೆಯಲ್ಲಿ ಎರಡು ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ತುರ್ತಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ ಎಂದು ಕೋರಿದರು.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ನುಲೇನೂರು ಎಂ.ಶಂಕರಪ್ಪ, ರವಿಕಿರಣ್ ಪುಣಚ, ಕಾರ್ಯದರ್ಶಿ ಗೋಪಾಲ್ ಇತರರಿದ್ದರು.