ಮಂಗಳೂರು: ಸುರತ್ಕಲ್ ಎನ್ಐಟಿಕೆ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಹಸವಾರ ಗಂಭೀರ ಗಾಯಗೊಂಡು ಮಂಗಳವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಡಗಿನ ಸೋಮವಾರ ಪೇಟೆಯ ಶಶಾಂಕ್(20) ಮೃತಪಟ್ಟವರು.
ಬೈಕ್ ಚಲಾಯಿಸುತ್ತಿದ್ದ ಚೇತನ್(21) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಕೆಂಜಾರಿನಲ್ಲಿರುವ ಶ್ರೀದೇವಿ ಕಾಲೇಜು ವಿದ್ಯಾರ್ಥಿಗಳಾಗಿದ್ದ ಅವರು ಕರಂಬಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತಡರಾತ್ರಿ ಬೈಕ್ನಲ್ಲಿ ಕಾವೂರು-ಕೂಳೂರು ಮಾರ್ಗವಾಗಿ ಸಂಚರಿಸಿ ಉಡುಪಿ ಕಡೆಗೆ ಹೋಗುವ ರಾ.ಹೆ. 66ರಲ್ಲಿ ಪಡುಬಿದ್ರಿ ಕಡೆಗೆ ಹೋಗುತ್ತಿದ್ದಾಗ ಎನ್ಐಟಿಕೆ ಬಳಿ ಹಂಪ್ಸ್ ಗಮನಕ್ಕೆ ಬಾರದೆ ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಪರಿಣಾಮ ಶಶಾಂಕ್ ಹಾಗೂ ಚೇತನ್ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಾಂಕ್ ಮೃತಪಟ್ಟಿದ್ದಾರೆ. ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.