More

    ಬೇಕರಿ, ಮಾಂಸದಂಗಡಿಗೆ ನಿರ್ಬಂಧವಿಲ್ಲ

    ಹಾವೇರಿ: ಕರೊನಾ ಸೋಂಕು ಹರಡದಂತೆ ಆರೋಗ್ಯ ಇಲಾಖೆಯ ಸುರಕ್ಷತಾ ಮಾನದಂಡ ಅಳವಡಿಸಿಕೊಂಡು ಬೇಕರಿ, ಚಿಕನ್, ಮೀನು ಮತ್ತು ಮಟನ್​ಶಾಪ್​ಗಳನ್ನು ತೆರೆಯಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಟಾಸ್ಕ್​ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೀನು, ಚಿಕನ್ ಹಾಗೂ ಮಟನ್ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ, ಪ್ರತಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆ ನಿರ್ವಹಣೆ ಮಾಡಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ಆಯ್ದ ಅಂಗಡಿಗಳನ್ನು ಗುರುತಿಸಿ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಸಿದರು.

    ಜಿಲ್ಲೆಯಲ್ಲಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಬೇಡಿಕೆ ಮತ್ತು ದಾಸ್ತಾನುಗಳ ವಿವರವನ್ನು ನಿತ್ಯ ಪರಿಶೀಲಿಸಬೇಕು. ದಿನಸಿಗಳ ಕೊರತೆಯಾಗದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ದಾಸ್ತಾನು ತರಿಸಿಕೊಳ್ಳಬೇಕು. ಮಾರಾಟಗಾರರು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡದಂತೆ ನಿಗಾವಹಿಸಬೇಕು. ಸಗಟು ವಿತರಣೆಯ ಸರಪಳಿಯಲ್ಲಿ ವ್ಯತ್ಯಯವಾಗದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

    ಪಡಿತರ ಪದಾರ್ಥಗಳನ್ನು ಕಾರ್ಡದಾರರಿಗೆ ಯಾವುದೇ ಗೊಂದಲವಿಲ್ಲದಂತೆ ವಿತರಿಸಬೇಕು. ಒಂದೊಮ್ಮೆ ಆನ್​ಲೈನ್ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದರೂ ರುಜು ಪಡೆದು ಪಡಿತರ ವಿತರಣೆಗೆ ಕ್ರಮವಹಿಸಬೇಕು. ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ನೆರಳಿನ ವ್ಯವಸ್ಥೆ ಹಾಗೂ ಕರೊನಾ ಸೋಂಕು ಹೊರಡದಂತೆ ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ನ್ಯಾಯ ಬೆಲೆ ಅಂಗಡಿಗಳನ್ನು ಮುಕ್ತವಾಗಿ ತೆರೆದಿಡಬೇಕು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್​ಗಳನ್ನು ತ್ವರಿತವಾಗಿ ವಿತರಿಸಲು ಕ್ರಮವಹಿಸಬೇಕು. ಸಿಲಿಂಡರ್ ಹಣವನ್ನು ಫಲಾನುಭವಿಗಳ ಖಾತೆಗೆ ಸರ್ಕಾರ ಮುಂಗಡವಾಗಿ ಜಮಾ ಮಾಡಲಿದೆ. ಈ ಹಣವನ್ನು ಡ್ರಾ ಮಾಡಿ ಸಿಲಿಂಡರ್ ವಿತರಕರಿಗೆ ಪಾವತಿಸಬೇಕು. ಈ ಕುರಿತು ಅಗತ್ಯ ಕ್ರಮವಹಿಸಿ ಎಂದು ಸೂಚಿಸಿದರು.

    ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳು ತೆರೆದಿರಬೇಕು. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಣ್ಣು-ತರಕಾರಿಗಳನ್ನು ಸ್ಥಳೀಯ ಬೇಡಿಕೆಗಳನ್ನು ಗುರುತಿಸಿ ಹೆಚ್ಚುವರಿ ಉತ್ಪಾದನೆಗಳನ್ನು ಹೊರ ಜಿಲ್ಲೆ, ಹೊರ ರಾಜ್ಯಕ್ಕೆ ಸಂಪರ್ಕ ಸಾಧಿಸಿ ರಫ್ತು ಮಾಡಬೇಕು. ಯಾವುದೇ ಕಾರಣಕ್ಕೂ ರೈತರ ಉತ್ಪನ್ನಗಳು ಹಾಳಾಗದಂತೆ ಕ್ರಮವಹಿಸಬೇಕು. ರೇಷ್ಮೆ ಗೂಡುಗಳ ಮಾರಾಟಕ್ಕೆ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

    ಬೀಜಗೊಬ್ಬರ ಅಂಗಡಿಗಳು ಎಂದಿನಂತೆ ತೆರೆದಿರಲಿ. ರೈತರು ಬೇಕಾದ ಸಂದರ್ಭದಲ್ಲಿ ಖರೀದಿಸುವ ಅವಕಾಶವಿರಬೇಕು. ರೈತರ ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಮಾರಾಟಗಾರರಿಗೆ ಅಗತ್ಯ ಪಾಸ್​ಗಳನ್ನು ವಿತರಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

    ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಹಣ ಜಮಾವಣೆಗೆ ಕ್ರಮವಹಿಸಬೇಕು. ಒಂದು ವಾರದಲ್ಲಿ ಹಣ ಜಮಾವಣೆಯಾಗುವಂತೆ ಕ್ರಮವಹಿಸಬೇಕು ಎಂದರು.

    ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ. ದಿಲೀಪ ಶಶಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಬೇಕರಿಗಳನ್ನು ತೆರೆಯಲು ಅವಕಾಶ ನೀಡಿ. ಆದರೆ ಬೇಕರಿಯಲ್ಲಿ ಟೀ, ಕಾಫಿ ಮಾರಾಟ ಮಾಡುವಂತಿಲ್ಲ. ಬೇಕರಿಗಳಲ್ಲಿ ಕುಳಿತು ತಿನ್ನಲು ಅವಕಾಶ ನೀಡಬಾರದು. ಹಳೆಯ ದಾಸ್ತಾನುಗಳನ್ನು ಮಾರಾಟ ಮಾಡದಂತೆ ಆರೋಗ್ಯ ಇಲಾಖೆಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಷರತ್ತಿನೊಂದಿಗೆ ಬೇಕರಿ ತೆರೆಯಲು ಕ್ರಮವಹಿಸಿ. ಬೇಕರಿ ಉತ್ಪಾದನೆಯ ಸುರಕ್ಷತೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು ಪರಿಶೀಲಿಸಬೇಕು.
    | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts